ನನ್ನ ಪುಟಗಳು

08 ನವೆಂಬರ್ 2013

ವಾಕ್ಯ ಪ್ರಭೇದಗಳು

ವಾಕ್ಯಪ್ರಭೇದಗಳು
ನಾವು ನಮ್ಮ ಮನಸ್ಸಿನ ಅಭಿಪ್ರಾಯಗಳನ್ನು ಇತರರಿಗೆ ಮಾತುಗಳ ಮೂಲಕ ತಿಳಿಯಪಡಿಸುತ್ತೇವೆ.  ಅಥವಾ ಬರೆವಣಿಗೆಯಿಂದ ತಿಳಿಯಪಡಿಸುತ್ತೇವೆ.
(೧) ಮಗುವು ಓಡಿತು.
(೨) ದೇವರು ಲೋಕವನ್ನು ಕಾಪಾಡುವನು.
(೩) ಭೀಮನಿಂದ ಬಕಾಸುರನು ಕೊಲ್ಲಲ್ಪಟ್ಟನು.
ಹೀಗೆ ಮೇಲೆ ಹೇಳಿರುವ ವಾಕ್ಯಗಳೆಲ್ಲ ಒಂದು ಸಂಪೂರ್ಣಾರ್ಥವನ್ನು ಕೊಡತಕ್ಕವುಗಳು. ಈ ವಾಕ್ಯಗಳಲ್ಲಿ ಒಂದೊಂದು ಪದವು ಇಲ್ಲದಿದ್ದರೂ ಅರ್ಥವು ಪೂರ್ಣವಾಗದೆ ಪುನಃ ಪ್ರಶ್ನೆ ಮಾಡಬೇಕಾಗುತ್ತದೆ.
() ಓಡಿತು:- ಹೀಗೆ ಒಂದೇ ಕ್ರಿಯಾಪದ ಹೇಳಿದಾಗ ಓಡಿದುದು ಯಾವುದು? ಎಂಬ ಪ್ರಶ್ನೆ ಬಂದೇ ಬರುತ್ತದೆ.  ಪೂರ್ಣಾರ್ಥವು ಈ ಒಂದೇ ಪದದಿಂದ ಆಗದು.  ಆದ್ದರಿಂದ ಅದನ್ನು ವಾಕ್ಯವೆನ್ನಲಾಗುವುದಿಲ್ಲ.
(೨) ದೇವರು ಲೋಕವನ್ನು:- ಹೀಗೆ ಕರ್ತೃ ಕರ್ಮ ಎರಡನ್ನೇ ಹೇಳಿದಾಗ, ದೇವರು ಲೋಕವನ್ನು ಏನು ಮಾಡಿದನು? ಎಂಬ ಪ್ರಶ್ನೆ ಏಳುವುದು.  ಆಗ ಕ್ರಿಯಾಪದ ಬೇಕೇ ಬೇಕಾಗುವುದು.
() ಭೀಮನಿಂದ ಕೊಲ್ಲಲ್ಪಟ್ಟನು:- ಎಂದಾಗ ಕೊಲ್ಲಲ್ಪಟ್ಟವನಾರು? ಎಂಬ ಕರ್ಮಪದದ ಬಗೆಗೆ ಪ್ರಶ್ನೆ ಎದ್ದೇ ಏಳುತ್ತದೆ.  ಹಾಗಾದರೆ ವಾಕ್ಯವೆಂದರೆ, ಕರ್ತೃ, ಕರ್ಮ, ಕ್ರಿಯಾಪದಗಳಿಂದ ಕೂಡಿದ ಪದ ಸಮೂಹವೆಂದಹಾಗಾಯಿತು.  ಆದರೆ ಕೆಲವು ವಾಕ್ಯಗಳಲ್ಲಿ ಕರ್ಮಪದದ ಅವಶ್ಯಕತೆ ಇರುವುದಿಲ್ಲ.  ಏಕೆಂದರೆ ಕ್ರಿಯಾ ಪದವೇ ಕರ್ಮವನ್ನು ಅಪೇಕ್ಷಿಸುವುದಿಲ್ಲ.  ಮಗು ಓಡಿತು ಎಂಬಲ್ಲಿ ಕರ್ಮಪದದ ಅರ್ಥವಿಲ್ಲ.
(೧) ಚಿಕ್ಕಮಗುವು ಹಾಡುತ್ತಾ ಕುಣಿಯುತ್ತಾ ಓಡಿತು.
(೨) ಮಹಾಶಕ್ತನಾದ ದೇವರು ಸಮಸ್ತ ಲೋಕಗಳನ್ನು ಪ್ರೀತಿಯಿಂದ ಕಾಪಾಡುವನು.
(೩) ಮಹಾಶೂರನಾದ ಭೀಮನಿಂದ ದುಷ್ಟನಾದ ಬಕನು ಪೂರ್ವಕಾಲದಲ್ಲಿ ಕೊಲ್ಲಲ್ಪಟ್ಟನು.
ಮೊದಲು ಹೇಳಿದ ಮೂರು ವಾಕ್ಯಗಳಲ್ಲಿ ಇನ್ನೂ ಕೆಲವು ಹೊಸಪದ ಸೇರಿಸಿ ವಾಕ್ಯ ಮಾಡಲಾಗಿದೆ.  ಮೊದಲ ಸಲ-
‘ಮಗು ಓಡಿತು’ ಇಷ್ಟೇ ಹೇಳಿತ್ತು.  ಈಗ ಚಿಕ್ಕ ಮಗುವು ಹಾಡುತ್ತ ಕುಣಿಯುತ್ತ ಓಡಿತು.
ಇಲ್ಲಿ- (i) ಮಗುವು-ಚಿಕ್ಕಮಗು
(ii) ಓಡಿದುದು-ಹಾಡುತ್ತ, ಕುಣಿಯುತ್ತ.
ಹಾಗಾದರೆ ಮಗು ಎಂಬ ಕರ್ತೃಪದಕ್ಕೆ ಚಿಕ್ಕಮಗು ಎಂಬುದೂ, ಓಡಿತು ಎಂಬುದಕ್ಕೆ ಹಾಡುತ್ತ, ಕುಣಿಯುತ್ತ, ಎಂಬುವೂ ವಿಶೇಷಣಗಳು.

"ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮೂಹವೇ ವಾಕ್ಯವೆನಿಸುವುದು."
ಅನೇಕ ವಾಕ್ಯಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯರಚನೆ ಎನಿಸುವುದು.

I – ಅನ್ವಯಾನುಕ್ರಮ
ವಾಕ್ಯದಲ್ಲಿ ಕರ್ತೃಪದ ಮೊದಲು, ಕರ್ಮಪದ ಆನಂತರ, ಕ್ರಿಯಾಪದ ಕೊನೆಯಲ್ಲಿ ಬರುತ್ತದೆ.  ವಿಶೇಷಣಗಳು ಆಯಾಯ ಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ.
ಉದಾಹರಣೆಗೆ:
‘ಮಹಾಶೂರನಾದ ಶ್ರೀ ರಾಮಚಂದ್ರನು ದುಷ್ಟನಾದ ರಾವಣನನ್ನು ತೀಕ್ಷ್ಣವಾದ ಬಾಣಗಳಿಂದ ಕೊಂದನು’.
ಇಲ್ಲಿ- ಶ್ರೀರಾಮಚಂದ್ರನು – ಕರ್ತೃ
ರಾವಣನನ್ನು – ಕರ್ಮ
ಕೊಂದನು - ಕ್ರಿಯಾಪದ
ಮೊದಲು ಕರ್ತೃಪದ; ಅದರ ಹಿಂದೆ ಆ ಕರ್ತೃಪದಕ್ಕೆ ವಿಶೇಷಣವಾದ ಮಹಾಶೂರನಾದ ಎಂಬ ವಿಶೇಷಣ, ಅನಂತರ ಕರ್ಮಪದ, ಅದರ ಹಿಂದೆ ಅದರ ವಿಶೇಷಣವಾದ ದುಷ್ಟನಾದ ಎಂಬ ವಿಶೇಷಣ.  ಅನಂತರ ಕ್ರಿಯಾಪದ; ಅದರ ಹಿಂದೆ ಯಾವ ಸಾಧನದಿಂದ ಕೊಂದನೋ ಆ ಸಾಧನವೇ ಕ್ರಿಯಾವಿಶೇ
ಷಣವಾಗಿ ಕ್ರಿಯಾಪದದ ಹಿಂದೆ ಬಂದಿದೆ.

ಈ ಅನ್ವಯಾನುಕ್ರಮವೂ ವ್ಯತ್ಯಾಸವಾಗಿ ಹೀಗೆಯೂ ಆಗಬಹುದು-
'ದುಷ್ಟನಾದ ರಾವಣನನ್ನು, ತೀಕ್ಷ್ಣವಾದ ಬಾಣಗಳಿಂದ ಮಹಾಶೂರನಾದ, ಶ್ರೀರಾಮಚಂದ್ರನು ಕೊಂದನು’.
ಇಲ್ಲಿ ಮೊದಲು ಕರ್ಮಪದ ಮತ್ತು ಅದರ ವಿಶೇಷಣ, ಅನಂತರ ಕ್ರಿಯೆಗೆ ಸಾಧನವಾದ ಬಾಣಗಳಿಂದ ಎಂಬಪದ; ಅನಂತರ ಮಹಾಶೂರನಾದ ರಾಮನು ಎಂಬ ಕರ್ತೃಪದ ಮತ್ತು ಅದರ ವಿಶೇಷಣ; ಕೊನೆಯಲ್ಲಿ ಕ್ರಿಯಾಪದ.  ಹೀಗೆ ಅನನ್ವಯವಾಗಿಯೂ ಇರುವುದುಂಟು.  ಪದ್ಯಗಳಲ್ಲಿ ಈ ರೀತಿಯು ವಿಶೇಷವಾಗಿ ಬರುತ್ತದೆ.  ಏಕೆಂದರೆ ಅವರು (ಪದ್ಯ ಬರೆಯುವವರು) ಪ್ರಾಸ, ಛಂದಸ್ಸು, ಗಣ-ಇತ್ಯಾದಿಗಳನ್ನು ಪಾಲಿಸುವುದಕ್ಕೋಸುಗ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಕ್ರಮವಾಗಿ ಬರೆದಿರುವುದಿಲ್ಲ.  ನಾವು ಆ ಪದ್ಯಕ್ಕೆ ಅರ್ಥ ಹೇಳುವಾಗ ಅನ್ವಯಕ್ರಮದಲ್ಲಿಯೇ ಹೇಳಬೇಕಾಗುವುದು.  ಅಂದರೆ ಮೊದಲು ಕರ್ತೃಪದವನ್ನು ಆ ಪದ್ಯದಲ್ಲಿ ಹುಡುಕಿ, ಅನಂತರ ಕರ್ಮಪದ ಹುಡುಕಿ, ಕೊನೆಗೆ ಕ್ರಿಯಾಪದದ ಅರ್ಥ ಹೇಳಬೇಕು.  ಹೀಗೆ ಪದ್ಯಕ್ಕೆ ಅರ್ಥ ಹೇಳುವುದನ್ನೇ ಅನ್ವಯಾನುಕ್ರಮದಲ್ಲಿ ಅರ್ಥ ವಿವರಣೆ ಮಾಡುವುದು ಎಂದು ಹೆಸರು.  ಉದಾಹರಣೆಗೆ-
‘ಮಾಡಿಕೊಂಡನು ಪರಮ ಪುರುಷನಕೂಡ ತೋಟಿಯ ಸಿದ್ಧರಾಮನು’
ಇಲ್ಲಿ ಕ್ರಿಯಾಪದ ಮಾಡಿಕೊಂಡನು ಎಂಬುದು.  ಇದು ಮೊದಲೇ ಬಂದಿದೆ.  ಮಾಡಿಕೊಂಡನು ಎಂಬುದಕ್ಕೆ ಯಾರು ಎಂದು ಪ್ರಶ್ನೆಮಾಡಿದರೆ ಸಿದ್ಧರಾಮನು ಎಂಬ ಕರ್ತೃಪದ ಬರುವುದು.  ಏನನ್ನು ಮಾಡಿಕೊಂಡನು ಎಂದು ಪ್ರಶ್ನಿಸಿದಾಗ ತೋಟಿಯನು ಎಂಬ ಕರ್ಮಪದ ಬರುವುದು.  ಹಾಗಾದರೆ ವಾಕ್ಯದಲ್ಲಿ-
‘ಸಿದ್ಧರಾಮನು ತೋಟಿಯನ್ನು ಮಾಡಿಕೊಂಡನು’ ಹೀಗೆ ಕರ್ತೃ ಕರ್ಮ ಕ್ರಿಯಾಪದ ಗಳು ಕ್ರಮವಾಗಿ ಬರುವಂತೆ ಅರ್ಥ ಹೇಳುವುದೇ ಅನ್ವಯಾನುಕ್ರಮವೆನಿಸುವುದು.  ಇವುಗಳಿಗೆ ವಿಶೇಷಣಗಳೇನಾದರೂ ಇವೆಯೇ ನೋಡಬೇಕು.  ಕರ್ತೃವಿಗಾಗಲೀ ಕರ್ಮಕ್ಕಾಗಲಿ ಇಲ್ಲಿ ವಿಶೇಷಣಗಳು ಇಲ್ಲ.  ‘ಮಾಡಿಕೊಂಡನು’ ಎಂಬ ಕ್ರಿಯಾಪದಕ್ಕೆ ‘ಪರಮಪುರುಷನಕೂಡ’ ಎಂಬ ಪದಸಮುಚ್ಚಯವು ವಿಶೇಷಣವಾಗಿದೆ.  ಹೀಗೆ ಅನನ್ವಯವಾಗಿರುವ ವಾಕ್ಯಗಳನ್ನು ಅನ್ವಯಾನುಕ್ರಮದಲ್ಲಿ ಅರ್ಥ ಹೇಳಬೇಕಾದುದನ್ನು ಮುಖ್ಯವಾಗಿ ಗಮನಿಸಬೇಕಾಗುವುದು.

[1] ಕೆಲವು ಸಂದರ್ಭದಲ್ಲಿ, ಈ ವಿಶೇಷಣಗಳು ವಿಶೇಷ್ಯದ ಮುಂದೆಯೂ ಬರುವುದುಂಟು.
[2] ತೋಟಿಯನು ಎಂಬ ಪ್ರಯೋಗವನ್ನು ತೋಟಿಯನ್ನು ಎಂಬ ಪದಕ್ಕೆ ಪ್ರತಿಯಾಗಿ ನಡುಗನ್ನಡದಲ್ಲಿ ಉಪಯೋಗಿಸುವುದುಂಟು.  ಇಲ್ಲಿ ದ್ವಿತೀಯಾವಿಭಕ್ತಿ ಅನು ಎಂದು ತಿಳಿಯಬೇಕು. 


II - ಆಧ್ಯಾಹಾರ

ವಾಕ್ಯ ಅರ್ಥವತ್ತಾಗಿರಬೇಕಾದರೆ ಕರ್ತೃ ಕರ್ಮ ಕ್ರಿಯಾಪದಗಳಿರಬೇಕೆಂದೂ ಕೆಲವು ಕಡೆ ಕರ್ಮಪದವಿರುವುದಿಲ್ಲವೆಂದೂ ಈ ಹಿಂದೆ ತಿಳಿದಿದ್ದೀರಿ.  ಆದರೆ ಕೆಲವು ಕಡೆ ಕ್ರಿಯಾಪದ ಮತ್ತು ಕರ್ತೃಪದಗಳಿಲ್ಲದೆಯೇ ವಾಕ್ಯಗಳಿರುವುದುಂಟು.
ಉದಾಹರಣೆಗೆ:
(i) X [1] ಈಗ ಬಂದನು (ಇಲ್ಲಿ ಕರ್ತೃಪದವಿಲ್ಲ)
ಎಂಬಲ್ಲಿ ‘ಬಂದನು’ ಎಂಬ ಒಂದು ಕ್ರಿಯಾಪದ ಮಾತ್ರ ಇದೆ. ‘ಯಾರು?’ ಎಂದು ಪ್ರಶ್ನಿಸಿದಾಗ ಬಂದನು ಎಂಬುದು ಪುಲ್ಲಿಂಗವಾಗಿರುವುದರಿಂದ ‘ಅವನು’ ಆತನು’ ಎಂಬ ಯಾವುದಾದರೂ ಒಂದು ಪದವನ್ನು ‘ಆಧ್ಯಾಹಾರ’ ಮಾಡಬೇಕಾಗುವುದು.

(ii) ಹುಡುಗನು ಬುದ್ಧಿವಂತ X
ಇಲ್ಲಿ ಕ್ರಿಯಾಪದವೇ ಇಲ್ಲ.  ಹುಡುಗನು, ಬದ್ಧಿವಂತ, ಈ ಎರಡು ಪದಗಳ ಆಧಾರದ ಮೇಲೆ ಪುಲ್ಲಿಂಗವನ್ನು ಹೇಳುವ ಕ್ರಿಯಾಪದವಿರಬೇಕೆಂದು ಊಹಿಸಿ ಆಗಿದ್ದಾನೆ, ಆಗುತ್ತಾನೆ, ಆದನು-ಎಂಬ ಏಕವಚನಾಂತವಾದ ಕ್ರಿಯಾಪದವನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಆಧ್ಯಾಹಾರ ಮಾಡಬೇಕು.

(iii) ಅವನು X ತಿಂದನು
ಇಲ್ಲಿ ಕರ್ತೃಪದವಿದೆ, ಕ್ರಿಯಾಪದವಿದೆ.  ತಿಂದನು ಎಂಬ ಕ್ರಿಯಾಪದ ಸಕರ್ಮಕವಾದ್ದರಿಂದ ಕರ್ಮಪದ ಬೇಕೇಬೇಕು.  ಆಗ ಈ ವಾಕ್ಯ ಬಂದ ಸಂದರ್ಭವನ್ನು ತಿಳಿದು ಅನ್ನವನ್ನು, ತಿಂಡಿಯನ್ನು, ಹಣ್ಣನ್ನು …… ಇತ್ಯಾದಿಯಾದ ಒಂದು ಪದವನ್ನು ಊಹಿಸಿ ಹೇಳಲೇಬೇಕಾಗುವುದು.  ಆದರೆ ಕರ್ಮಪದಗಳ ಆಧ್ಯಾಹಾರ ತೀರ ಕಡಿಮೆ.  ಕರ್ತೃಪದ ಕ್ರಿಯಾಪದಗಳ ಆಧ್ಯಾಹಾರದ ಸಂದರ್ಭ ವಿಶೇಷವಾಗಿ ಬರುತ್ತದೆ.

"ವಾಕ್ಯದಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದೇ ಆಧ್ಯಾಹಾರ ವೆನಿಸುವುದು."
ಉದಾಹರಣೆಗೆ:
(i) ಕರ್ತೃಪದಗಳ ಆಧ್ಯಾಹಾರಕ್ಕೆ ಉದಾಹರಣೆ-
(೧)  X ಈಗ ಹೋದನು                       (ಅವನು)
(೨)  X  ನಾಳೆ ಬರುತ್ತೇನೆ                     (ನಾನು)
(೩)  X  ಮೊನ್ನೆ ಬಂದನು                      (ಅವನು)
(೪)  X  ಒಂದು ತಿಂಗಳ ನಂತರ ಹೋಗೋಣ (ನಾವು)

(ii) ಕರ್ಮಪದಗಳ ಆಧ್ಯಾಹಾರಕ್ಕೆ ಉದಾಹರಣೆ-
ಈಗತಾನೆ X ಅವನು ತಿಂದನು
(ಇಲ್ಲಿ ಹಣ್ಣನ್ನು, ತಿಂಡಿಯನ್ನು – ಇತ್ಯಾದಿ ಸಂದರ್ಭಕ್ಕೆ ಅನುಗುಣವಾಗಿ ಆಧ್ಯಾಹಾರ ಪದವನ್ನು ಊಹಿಸಬೇಕು)

(iii) ಕ್ರಿಯಾಪದಗಳ ಆಧ್ಯಾಹಾರಕ್ಕೆ ಉದಾಹರಣೆ-
(೧) ಅವರ ಮನೆ ಎಲ್ಲಿ X ?          (ಇದೆ)
(೨) ನಿನ್ನೆ ಕೊಟ್ಟ ಪುಸ್ತಕವೆಲ್ಲಿ X ?        (ಇದೆ)
(೩) ನಾನು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ X      (ಆಗಿದ್ದೇನೆ)
(೪) ಅದು ಬಹು ದೊಡ್ಡ ವಿಚಾರ X     (ಆಗಿದೆ)
(೫) ಎಲ್ಲವೂ ತನಗೇ  X ಎಂದನು       (ಬೇಕು)
(೬) ನನಗೆ ಐವರು ಪುತ್ರರು  X                           (ಇರುವರು)
(೭) ಈತನೇ ಹಿರಿಯಮಗ X                            (ಆಗಿದ್ದಾನೆ)
(೮) ಅಲ್ಲಿ ಆಡುವವಳೇ ನನ್ನ ಮಗಳು X             (ಆಗಿದ್ದಾಳೆ)
(೯) ರಾಮ ಬಂದನು, ಭೀಮನೂ ಕೂಡ X          (ಬಂದನು)
ಹೀಗೆ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಅಲ್ಲಿರುವ ಇತರ ಪದಗಳ ಸಹಾಯದಿಂದ ಊಹಿಸಿ ಹೇಳುವುದೇ ಆಧ್ಯಾಹಾರವೆಂದ ಹಾಗಾಯಿತು.

[1] ಇಲ್ಲದಿರುವ ಪದದ ಸ್ಥಳದಲ್ಲಿ X ಗುರುತು ಮಾಡಲಾಗಿದೆ.  ಅಲ್ಲಿ ವಾಕ್ಯದಲ್ಲಿರುವ ಇತರ ಪದಗಳ ಆಧಾರದ ಮೇಲೆ ಇರಬೇಕಾದ ಪದವನ್ನು ಊಹಿಸಿ ಹೇಳಬೇಕು.


III - ವಾಕ್ಯಗಳ ಪ್ರಕಾರಗಳು

ಸಾಮಾನ್ಯ ವಾಕ್ಯ, ಸಂಯೋಜಿತ ವಾಕ್ಯ, ಮಿಶ್ರವಾಕ್ಯಗಳು
ಇದುವರೆಗೆ ವಾಕ್ಯವೆಂದರೇನು? ವಾಕ್ಯದಲ್ಲಿ ಅನ್ವಯಾನುಕ್ರಮ, ಆಧ್ಯಾಹಾರಗಳೆಂದರೇನು? ಎಂಬ ಬಗೆಗೆ ಸ್ಥೂಲವಾಗಿ ಕೆಲವು ವಿಷಯ ತಿಳಿದಿರುವಿರಿ.  ಈಗ ವಾಕ್ಯಗಳಲ್ಲಿ ಮೂರು ರೀತಿಯ ಪ್ರಧಾನವಾದ ಭೇದಗಳನ್ನು ಮಾತ್ರ ತಿಳಿದರೆ ಸಾಕು.

() ಸಾಮಾನ್ಯ ವಾಕ್ಯ
ಈ ಕೆಳಗಿನ ವಾಕ್ಯಗಳನ್ನು ನೋಡಿರಿ.
(ಅ) ಖಾನದೇಶವು ಮಲೇರಿಯಾದ ತವರೂರಾಗಿತ್ತು.
(ಆ) ಖಾನದೇಶದಲ್ಲಿ ವಿಶ್ವೇಶ್ವರಯ್ಯನವರು ಮಲೇರಿಯಾ ಬೇನೆಯಿಂದ ಬಳಲಿದರು.
(ಇ) ವಿಶ್ವೇಶ್ವರಯ್ಯನವರು ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ವರ್ಗಕ್ಕೆ ಅರ್ಜಿ ಹಾಕಿದರು.
(ಈ) ವಿಶ್ವೇಶ್ವರಯ್ಯನವರನ್ನು ರಸ್ತೆ ಮತ್ತು ಕಟ್ಟಡಗಳ ಮೇಲ್ವಿಚಾರಣೆಯ ವಿಭಾಗಕ್ಕೆ ವರ್ಗ ಮಾಡಿದರು.
ಈ ನಾಲ್ಕೂ ವಾಕ್ಯಗಳೂ ಒಂದೊಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ವಾಕ್ಯಗಳಾಗಿವೆ.

"ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವುವು."

ಸಾಮಾನ್ಯ ವಾಕ್ಯದಲ್ಲಿ ಕ್ರಿಯಾಪದವು ಒಂದು ಮಾತ್ರ ಇರಬೇಕುಸಾಪೇಕ್ಷ ಕ್ರಿಯಾರೂಪಗಳು ಮಧ್ಯದಲ್ಲಿ ಬರಬಹುದು ಕೆಳಗೆ ಸಾಪೇಕ್ಷ ಕ್ರಿಯಾರೂಪಗಳಿಂದ ಕೂಡಿ, ಒಂದೇ ಕ್ರಿಯಾಪದದಿಂದ ಪೂರ್ಣಗೊಂಡ ಸಾಮಾನ್ಯ ವಾಕ್ಯ ನೋಡಿರಿ.
“ಖಾನದೇಶವು ಮಲೇರಿಯಾದಿಂದ ಕೂಡಿ, ವಿಶ್ವೇಶ್ವರಯ್ಯನವರ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡಿ, ಅವರು ಅಲ್ಲಿಂದ ವರ್ಗವಾಗುವಂತೆ ಮಾಡಿತು.”
ಇಲ್ಲಿ ‘ಮಾಡಿತು’ ಎಂಬ ಒಂದೇ ಕ್ರಿಯಾಪದವಿದ್ದು ‘ಕೂಡಿ, ಮಾಡಿ‘ ಎಂಬ ಸಾಪೇಕ್ಷ ಕ್ರಿಯೆಗಳು ಮಧ್ಯದಲ್ಲಿ ಬಂದಿವೆ.

[ಟಿಪ್ಪಣಿ: ಸಾಪೇಕ್ಷ ಕ್ರಿಯಾರೂಪಗಳು: ಈ ರೂಪಗಳನ್ನು ಅಪೂರ್ಣ ಕ್ರಿಯಾರೂಪ ಎಂದೂ ಕರೆಯುವರು. ಯಾವುದೇ ವಾಕ್ಯದಲ್ಲಿ ಅರ್ಥವನ್ನು ಪೂರ್ಣ ಮಾಡಲು, ಬೇರೊಂದು ಕ್ರಿಯಾಪದದ ರೂಪವನ್ನು ಬಳಸಿದಾಗ, ಅಂತಹ ಕ್ರಿಯಾರೂಪಗಳನ್ನು ಸಾಪೇಕ್ಷ ಕ್ರಿಯಾರೂಪ ಎನ್ನುವರು.
ಉದಾಹರಣೆ :
          * ರಾಧಾ ಒಂದೇ ಉಸುರಿಗೆ ಓಡೋಡುತ್ತಾ ತಾಯಿಯ ಬಳಿಗೆ ಬಂದಳು.
          * ಕರು ಬೇಗ ಬೇಗ ನೆಗೆದಾಡುತ್ತಾ ಓಟ ಕಿತ್ತಿತು.
ಮೇಲಿನ ವಾಕ್ಯಗಳಲ್ಲಿ ನೆಗೆದಾಡುತ್ತಾ, ಓಡಾಡುತ್ತಾ ಎಂಬ ಪದಗಳು ಕ್ರಿಯಾರೂಪ ಗಳಾಗಿವೆ. ಇವು ಸ್ವತಂತ್ರರೂಪದಲ್ಲಿ ಪ್ರಯೋಗದಲ್ಲಿ ಬರುವುದು. ಕ್ರಿಯಾಪದದ ಅರ್ಥವನ್ನು ಪೂರ್ಣಗೊಳಿಸಲು ಅದರೊಂದಿಗೆ ನೆರವಿನ ರೂಪದಲ್ಲಿ ಬರುತ್ತವೆ. ಆದ್ದರಿಂದಲೇ ಇವನ್ನು ಅಪೂರ್ಣ ಕ್ರಿಯಾರೂಪ ಎನ್ನುವರು.]

() ಸಂಯೋಜಿತ ವಾಕ್ಯ
‘ಖಾನದೇಶವು ಮಲೇರಿಯಾದ ತವರೂರೆನಿಸಿತ್ತು; ಆದ್ದರಿಂದ ವಿಶ್ವೇಶ್ವರಯ್ಯನವರೂ ಅಲ್ಲಿ ಮಲೇರಿಯಾದಿಂದ ಬಳಲಬೇಕಾಯಿತು; ಈ ಕಾರಣದಿಂದಲೇ ಅವರು ಅಲ್ಲಿಂದ ವರ್ಗ ಮಾಡಿಸಿಕೊಂಡರು.’
ಮೇಲಿನ ಈ ವಾಕ್ಯ ಸಮೂಹದಲ್ಲಿ ಬೇರೆ ಬೇರೆ ಮೂರು ವಾಕ್ಯಗಳಿವೆ.  ಆದರೆ ಆ ವಾಕ್ಯಗಳು ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ.  ಹೀಗೆ-

"ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತ ವಾಕ್ಯವೆನಿಸಿಕೊಳ್ಳುವುದು."
ಉದಾಹರಣೆಗೆ:
ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು; ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು; ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.
ಇಲ್ಲಿ-
(i) ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು.
(ii) ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು.
(iii) ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.
ಈ ಮೂರು ಸ್ವತಂತ್ರ ಕ್ರಿಯಾಪದವುಳ್ಳ ವಾಕ್ಯಗಳು ಒಂದಕ್ಕೊಂದು ‘ಆಗಆದ್ದರಿಂದ-ಎಂಬ ಶಬ್ದಗಳ ಸಂಬಂಧದಿಂದ ಒಂದು ಅಭಿಪ್ರಾಯವನ್ನು ಪೂರ್ಣ ಹೇಳುವ ಸಂಯೋಜಿತ ವಾಕ್ಯವೆನಿಸಿದೆ.

() ಮಿಶ್ರವಾಕ್ಯ
() ನಮ್ಮ ಪರೀಕ್ಷೆ ಮುಗಿಯಿತೆಂದು, ತಂದೆಗೆ ಮಗನು ತಿಳಿಸಿದನು.
ಇಲ್ಲಿ ಪ್ರಧಾನ ಕ್ರಿಯಾಪದ ‘ತಿಳಿಸಿದನು’ ಎಂಬುದು, ‘ನಮ್ಮ ಪರೀಕ್ಷೆ ಮುಗಿಯಿತು ಎಂದು’ ಎಂಬ ಈ ಉಪವಾಕ್ಯವೇ ‘ತಿಳಿಸಿದನು’ ಎಂಬ ಕ್ರಿಯಾಪದದ ಕರ್ಮವಾಯಿತು.
() ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತೆಂಬುದನ್ನು ಅವನಿಂದಲೇ ಕೇಳಿದೆನು.
ಇಲ್ಲಿ ‘ಕೇಳಿದೆನು’ ಎಂಬ ಕ್ರಿಯಾಪದವು ಪ್ರಧಾನ ಕ್ರಿಯಾಪದ.  ಈ ಕ್ರಿಯಾಪದಕ್ಕೆ ಮೊದಲನೆಯ ವಾಕ್ಯವಾದ ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತು ಎಂಬುದನ್ನು ಎಂಬುದು ಕರ್ಮವಾಗಿ ಅಧೀನ ವಾಕ್ಯವೆನಿಸಿದೆ.  ಕೇಳಿದೆನು ಎಂಬ ಕ್ರಿಯಾಪದದ ಕರ್ತೃವು ಇಲ್ಲಿ ಹೇಳಲ್ಪಟ್ಟಿಲ್ಲ.  ನಾನು ಎಂದು ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.  ಇಂಥ-

"ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯವೆನ್ನುತ್ತೇವೆ."
ಉದಾಹರಣೆಗೆ:
ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು.
ಇಲ್ಲಿ ’ಬಹುವಾಗಿ ಮರುಗಿದರು’ ಎಂಬ ಪ್ರಧಾನ ವಾಕ್ಯಕ್ಕೆ – (೧) ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು.  (೨) ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲ.  ಎಂಬ ವಾಕ್ಯಗಳು ಉಪವಾಕ್ಯಗಳೆನಿಸಿ ಇದು ಮಿಶ್ರವಾಕ್ಯವೆನಿಸಿದೆ.

IV - ವಾಕ್ಯವಿಭಜನೆ
ಇದುವರೆಗೆ-ಸಾಮಾನ್ಯ ವಾಕ್ಯ, ಸಂಯೋಜಿತವಾಕ್ಯ, ಮಿಶ್ರವಾಕ್ಯಗಳ ಸಾಮಾನ್ಯ ಪರಿಚಯ ಮಾಡಿಕೊಂಡಿರಿ.  ಒಂದೊಂದು ವಾಕ್ಯದಲ್ಲೂ ಕರ್ತೃ, ಕರ್ಮ (ಸಕರ್ಮಕ ಧಾತುವಾಗಿದ್ದರೆ ಮಾತ್ರ), ಕ್ರಿಯಾಪದಗಳು ಮುಖ್ಯವಾಗಿರಬೇಕು.  ಒಮ್ಮೊಮ್ಮೆ ವಾಕ್ಯದಲ್ಲಿ ಈ ಪದಗಳಲ್ಲಿ ಯಾವುದಾದರೂ ಒಂದು ಪದವಿರದಿದ್ದರೆ, ಸಂದರ್ಭ ಮತ್ತು ಇರುವ ಪದಗಳ ಅರ್ಥದ ಸಹಾಯದಿಂದ ಇರಬೇಕಾದ ಪದದ ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.  ಹೀಗಿರುವ ಕರ್ತೃ, ಕರ್ಮ, ಕ್ರಿಯೆಗಳಿಂದ ಕೂಡಿದ ವಾಕ್ಯದಲ್ಲಿ ಕರ್ತೃವಿಗೂ ಕರ್ಮಕ್ಕೂ, ಕ್ರಿಯಾಪದಕ್ಕೂ ವಿಶೇಷಣ ಪದಗಳೂ ಇರುತ್ತವೆ.
ಉದಾಹರಣೆಗೆ-
ದೊಡ್ಡ ದೊಡ್ಡ ಮಕ್ಕಳು ತಂದೆ ತಾಯಿಗಳ ಕಾರ್ಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಅವಶ್ಯವಾಗಿ ಮಾಡಲೇಬೇಕು.
ಈ ವಾಕ್ಯದಲ್ಲಿ ‘ಮಾಡಲೇಬೇಕು’-ಎಂಬುದೇ ಕ್ರಿಯಾಪದ.  ‘ಮಕ್ಕಳು’-ಕರ್ತೃ, ‘ಸಹಾಯವನ್ನು’-ಕರ್ಮ.  ಅಂದರೆ ‘ಮಕ್ಕಳು ಸಹಾಯವನ್ನು ಮಾಡಲೇಬೇಕು’ ಎಂಬ ಈ ಮೂರು ಪದಗಳು ಕ್ರಮವಾಗಿ ಕರ್ತೃ, ಕರ್ಮ, ಕ್ರಿಯೆಗಳಾದರೆ-ಇವುಗಳಿಗೆ ಒಂದೊಂದಕ್ಕೂ ವಿಶೇಷಣ ಪದಗಳಿವೆ.
(i) ಮಕ್ಕಳು-ಎಂಬುದಕ್ಕೆ ‘ದೊಡ್ಡ ದೊಡ್ಡ’ ಎಂಬಿವು ವಿಶೇಷಣಗಳು.
(ii) ಸಹಾಯವನ್ನು-ಎಂಬುದಕ್ಕೆ ತಂದೆ ತಾಯಿಗಳ ಕಾರ‍್ಯದಲ್ಲಿ ಎಂಬ ಪದಗಳೂ,
(iii) ಮಾಡಲೇಬೇಕು-ಎಂಬ ಕ್ರಿಯಾಪದಕ್ಕೆ ಅವಶ್ಯವಾಗಿ ಎಂಬುದೂ ವಿಶೇಷಣಗಳು.
ಹೀಗೆ ಕರ್ತೃ, ಕರ್ಮ, ಕ್ರಿಯಾಪದ ಇತ್ಯಾದಿ ಪ್ರಧಾನ ಪದಗಳಿಗೆ ಇರುವ ಕರ್ತೃ ವಿಶೇಷಣಗಳು, ಕರ್ಮವಿಶೇಷಣಗಳು, ಕ್ರಿಯಾವಿಶೇಷಣಗಳೇ ಮೊದಲಾದುವನ್ನು ಅವುಗಳ ಸಂಬಂಧವನ್ನು ಬೇರ್ಪಡಿಸಿ ಹೇಳುವ ವಿಧಾನವೇ ವಾಕ್ಯವಿಭಜನೆಯೆನಿಸುವುದು.   ಕ್ರಮದಿಂದ ನಮಗೆ ವಾಕ್ಯ ರಚನೆ ಸ್ಪಷ್ಟವಾಗುವುದು.

[1] ಮಾಡಲೇಬೇಕು ಎಂಬಲ್ಲಿ ಬೇಕು ಎಂಬುದಿಷ್ಟೇ ಅವ್ಯಯ ಕ್ರಿಯಾಪದ.  (ಕ್ರಿಯಾರ್ಥಕಾವ್ಯಯ) ಮಾಡಲೇಬೇಕು ಎಂದು ಕ್ರಿಯಾಪದವಾಗಿ ತೋರಿಸುವುದು ಕೇವಲ ಸ್ಪಷ್ಟತೆಗೋಸ್ಕರ ಮಾತ್ರ.

V - ರೂಪನಿಷ್ಪತ್ತಿ
"ಭಾಷೆಯಲ್ಲಿ ನಾವು ಮಾತನಾಡುವ ಮತ್ತು ಬರೆಯುವ, ಕಾವ್ಯಗಳಲ್ಲಿ ಬರುವ ಶಬ್ದಗಳು ವ್ಯಾಕರಣದ ಯಾವ ನಿಯಮಕ್ಕನುಗುಣವಾಗಿ ಸಿದ್ಧವಾಗಿವೆ? ಅವುಗಳ ಕಾರ್ಯ ಮತ್ತು ಪ್ರಯೋಜನಗಳೇನು? ಸಂಬಂಧವೇನು? ಎಂಬುದನ್ನು ತಿಳಿಸುವುದೇ ರೂಪನಿಷ್ಪತ್ತಿಯೆನಿಸುವುದು."
ಉದಾಹರಣೆಗೆ ಈ ವಾಕ್ಯವನ್ನು ನೋಡಿರಿ.
(i) ರಾಜನು ರಾಜ್ಯವನ್ನು ಆಳುತ್ತಾನೆ.
ಈ ವಾಕ್ಯದಲ್ಲಿ ಮೂರು ಪದಗಳಿವೆ.  ರಾಜನು ಎಂಬುದು ಕರ್ತೃಪದ, ರಾಜ್ಯವನ್ನು ಕರ್ಮಪದ, ಆಳುತ್ತಾನೆ ಎಂಬುದು ಕ್ರಿಯಾಪದ.  ಒಂದೊಂದು ಪದವೂ ಹೇಗೆ ರೂಪ ಸಿದ್ಧಿಯನ್ನು ವ್ಯಾಕರಣ ದೃಷ್ಟಿಯಿಂದ ಪಡೆದಿದೆ, ಎಂಬುದನ್ನು ನೋಡಿರಿ.
(೧) ರಾಜನು – ‘ರಾಜ’ ಎಂಬ ಅಕಾರಾಂತ ಪುಲ್ಲಿಂಗ ಪ್ರಕೃತಿಯ ಮೇಲೆ ಉ ಎಂಬ ಪ್ರಥಮಾವಿಭಕ್ತಿಪ್ರತ್ಯಯ ಬಂದು, ನಡುವೆ ನಕಾರಾಗಮವಾಗಿ ‘ರಾಜನು’ ಎಂಬ ರೂಪವೊಂದಿ, ‘ಆಳುತ್ತಾನೆ’ ಎಂಬ ಕ್ರಿಯೆಗೆ ಕರ್ತೃವಾಯಿತು.
(೨) ರಾಜ್ಯವನ್ನು – ‘ರಾಜ್ಯ’ ಎಂಬ ಅಕಾರಾಂತ ನಪುಂಸಕಲಿಂಗ ಪ್ರಕೃತಿಯು ದ್ವಿತೀಯಾವಿಭಕ್ತಿ ಏಕವಚನವನ್ನು ಹೊಂದಿ ‘ರಾಜ್ಯವನ್ನು’ ಎಂಬ ಪದವಾಗಿ ‘ಆಳುತ್ತಾನೆ’ ಎಂಬ ಕ್ರಿಯೆಗೆ ಕರ್ಮವಾಯಿತು (ಕರ್ಮಪದವಾಯಿತು).
(೩) ಆಳುತ್ತಾನೆ – ‘ಆಳು’ ಎಂಬ ಉಕಾರಾಂತ ಧಾತುವಿಗೆ ವರ್ತಮಾನಕಾಲದ ಪ್ರಥಮ ಪುರುಷ ಪುಲ್ಲಿಂಗ ಏಕವಚನದ ಆಖ್ಯಾತಪ್ರತ್ಯಯ ಬಂದು ‘ಆಳುತ್ತಾನೆ’ ಎಂಬ ಕ್ರಿಯಾಪದ ರೂಪಸಿದ್ಧಿ ಪಡೆಯಿತು.
ಹೀಗೆ ವಾಕ್ಯದಲ್ಲಿರುವ ಪ್ರತಿ ಶಬ್ದದ ರೂಪಸಿದ್ಧಿಯು ವ್ಯಾಕರಣ ನಿಯಮದಂತೆ ಹೇಗಾಯಿತೆಂದು ಹೇಳುವುದೇ ರೂಪನಿಷ್ಪತ್ತಿಯೆನಿಸುವುದು.
ಕೆಳಗಿನ ವಾಕ್ಯದಲ್ಲಿ ಬಂದಿರುವ ಶಬ್ದಗಳ ರೂಪನಿಷ್ಪತ್ತಿಯನ್ನು ಗಮನಿಸಿರಿ.
(i) ವಿಶ್ವೇಶ್ವರಯ್ಯನವರು ಉದ್ಯೋಗವನ್ನು ಹುಡುಕಿಕೊಂಡು ಹೋಗಲಿಲ್ಲ; ಉದ್ಯೋಗವೇ ಅವರನ್ನು ಹುಡುಕಿಕೊಂಡು ಬಂದಿತು.
(೧) ವಿಶ್ವೇಶ್ವರಯ್ಯನವರು – ‘ವಿಶ್ವೇಶ್ವರಯ್ಯ’ ಎಂಬ ಅಕಾರಾಂತಪುಲ್ಲಿಂಗನಾಮಪ್ರಕೃತಿಗೆ ಗೌರವಾರ್ಥದಲ್ಲಿ ಪ್ರಥಮಾ ಬಹುವಚನ.  ‘ಹೋಗಲಿಲ್ಲ’ ಎಂಬ ಕ್ರಿಯೆಗೆ ಕರ್ತೃಪದ.
(೨) ಉದ್ಯೋಗವನ್ನು – ‘ಉದ್ಯೋಗ’ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿ.                           ‘ಅನ್ನು‘ ಎಂಬ ದ್ವಿತೀಯಾವಿಭಕ್ತಿ ಏಕವಚನ.  ‘ಹೋಗಲಿಲ್ಲ‘ ಎಂಬ ಕ್ರಿಯಾಪದಕ್ಕೆ ಕರ್ಮಪದ.
(೩) ಹುಡುಕಿಕೊಂಡು – ‘ಹುಡುಕಿಕೊಳ್ಳು’ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ.  ‘ಹುಡುಕಿಕೊಳ್ಳು‘ ಧಾತುವಿನ ಮೇಲೆ ‘ದು‘ ಪ್ರತ್ಯಯ ಬಂದು ‘ಹುಡುಕಿಕೊಂಡು‘ ಎಂಬ ಕೃದಂತಾವ್ಯಯವಾಗಿದೆ. ಇದು ‘ಹೋಗಲಿಲ್ಲ‘ ಎಂಬ ಕ್ರಿಯೆಗೆ ವಿಶೇಷಣವಾಗಿ ಬಂದಿದೆ.
(೪) ಹೋಗಲಿಲ್ಲ – ‘ಹೋಗಲು‘‘ಇಲ್ಲ‘, ಎಂಬ ಎರಡು ಪದಗಳಿವೆ.  ‘ಹೋಗಲು‘ ಎಂಬುದು ‘ಹೋಗು‘ ಧಾತುವಿನ ಮೇಲೆ ‘ಅಲು‘ ಎಂಬ ಪ್ರತ್ಯಯ ಬಂದು ‘ಹೋಗಲು‘ ಎಂಬ ಕೃದಂತಾವ್ಯಯವಾಗಿದೆ.  ‘ಇಲ್ಲ‘ ಎಂಬುದು ನಿಷೇಧಾರ್ಥಕ ಕ್ರಿಯಾರ್ಥಕಾವ್ಯಯ.
(೫) ಉದ್ಯೋಗವು – ‘ಉದ್ಯೋಗ‘ ಎಂಬ ಅಕಾರಾಂತ ನಪುಂಸಕಲಿಂಗ ನಾಮ ಪ್ರಕೃತಿ. ಪ್ರಥಮಾವಿಭಕ್ತಿ ಏಕವಚನ, ಬಂದಿತು ಎಂಬ ಕ್ರಿಯೆಗೆ ಕರ್ತೃಪದ.
(೬) ಅವಧಾರಣಾರ್ಥಕ ಅವ್ಯಯ.
(೭) ಅವರನ್ನು – ‘ಅವನು‘ ಉಕಾರಾಂತ ಪುಲ್ಲಿಂಗ.  ಪುರುಷಾರ್ಥಕ ಸರ್ವನಾಮ                     (ಪ್ರಥಮಪುರುಷಪುಲ್ಲಿಂಗ) ದ ಮೇಲೆ ಗೌರವಾರ್ಥದಲ್ಲಿ ದ್ವಿತೀಯಾ ಬಹುವಚನದ ನಾಮವಿಭಕ್ತಿಪ್ರತ್ಯಯ ಬಂದು ‘ಅವರನ್ನು‘ ಎಂಬ ರೂಪವಾಗಿದೆ.
(೮) ಹುಡುಕಿಕೊಂಡು – ‘ಹುಡುಕಿಕೊಳ್ಳು‘ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ.                          ‘ಹುಡುಕಿಕೊಳ್ಳು‘ ಧಾತುವಿನ ಮೇಲೆ ‘ದು‘ ಪ್ರತ್ಯಯ ಬಂದು, ಹುಡುಕಿಕೊಂಡು ಎಂಬ ಕೃದಂತಾವ್ಯಯವಾಗಿದೆ.  ಇದು ಅವರನ್ನು ಎಂಬ ಪದದೊಡನೆ ಬಂದಿತು ಎಂಬ ಕ್ರಿಯೆಗೆ ವಿಶೇಷಣವಾಗಿದೆ.
(೯) ಬಂದಿತು-‘ಬರು‘ ಧಾತು, ಭೂತಕಾಲ, ಪ್ರಥಮ ಪುರುಷ, ನಪುಂಸಕಲಿಂಗ, ಏಕವಚನ ಕ್ರಿಯಾಪದ.
ಈ ರೀತಿ ಮೇಲೆ ಹೇಳಿದ ಹಾಗೆ ವಾಕ್ಯಗಳಲ್ಲಿ ಬರುವ ಪ್ರತಿ ಪದಕ್ಕೂ ರೂಪನಿಷ್ಪತ್ತಿಯನ್ನು ಹೇಳಬೇಕು.

[1] ಹೋಗಲು ‘ಇಲ್ಲ’. ‘ಇಲ್ಲ’ ಎಂಬ ಅವ್ಯಯ ಕ್ರಿಯಾಪದ (ಕ್ರಿಯಾರ್ಥಕಾವ್ಯಯ) ಬರುವಾಗ ‘ಹೋಗಲು’ ಎಂಬ ಕೃದಂತಾವ್ಯಯದ ಜೊತೆಗೆ ಬಂದಿದೆ.  ‘ಹೋಗಲು’ ಎಂಬುದು ‘ಹೋಗು’ ಧಾತುವಿನ ಮೇಲೆ ‘ಅಲು’ ಪ್ರತ್ಯಯ ಸೇರಿ ಕೃದಂತಾವ್ಯಯವಾಗಿದೆ.
[2] ‘ಇಲ್ಲ’ ಎಂಬ ನಿಷೇಧಾರ್ಥಕ ಕ್ರಿಯಾರ್ಥಕಾವ್ಯಯವು ಕೆಲವು ಕಡೆ, ‘ಅಲು’ ಪ್ರತ್ಯಯಾಂತ ಕೃದಂತಾವ್ಯಯದ ಜೊತೆಗೆ ಪ್ರಯೋಗವಾಗುವುದು-ಉದಾಹರಣೆಗೆ: ಮಾಡಲಿಲ್ಲ, ತಿನ್ನಲಿಲ್ಲ, ನೋಡಲಿಲ್ಲ-ಇತ್ಯಾದಿ.  ಕೆಲವು ಕಡೆ ಸ್ವತಂತ್ರವಾಗಿಯೂ ಇರುವುದುಂಟು.  ನನ್ನಲ್ಲಿ ಅದು ಇಲ್ಲ, ಆತನು ಮನೆಯಲ್ಲಿ ಇಲ್ಲ-ಇತ್ಯಾದಿ.

ಸಾರಾಂಶ

ಎಂದು ವಾಕ್ಯಗಳು ಮೂರು ಬಗೆ
() ಪ್ರತಿಯೊಂದು ವಾಕ್ಯದಲ್ಲೂ ಕರ್ತೃಪದ ಮತ್ತು ಅದರ ವಿಶೇಷಣಗಳು, ಕರ್ಮಪದ ಅದರ ವಿಶೇಷಣಗಳು, ಕ್ರಿಯಾಪದ ಅದರ ವಿಶೇಷಣಗಳೂ ಇರುತ್ತವೆ. ವಿಶೇಷಣಗಳು ಇಲ್ಲದೆಯೂ ಇರುವುದುಂಟು.
() ಅಕರ್ಮಕಧಾತುವಿನ ಕ್ರಿಯಾಪದವುಳ್ಳ ವಾಕ್ಯದಲ್ಲಿ ಕರ್ಮಪದವಿರುವುದಿಲ್ಲ.
() ಅನ್ವಯಾನು ಕ್ರಮವೆಂದರೆ - ಮೊದಲು ಕರ್ತೃಪದ, ಆಮೇಲೆ ಕರ್ಮಪದ ಅನಂತರ ಕ್ರಿಯಾಪದ ಬರುವಂತೆ ಜೋಡಿಸುವಿಕೆ. ಕರ್ತೃ, ಕರ್ಮ, ಕ್ರಿಯೆಗಳಿಗಿರುವ ವಿಶೇಷಣಗಳನ್ನು ಇವುಗಳ ಹಿಂದೆಯೇ ಜೋಡಿಸಿ ಹೇಳಬೇಕು.
() ಕರ್ತೃ, ಕರ್ಮ, ಕ್ರಿಯಾಪದಗಳು ಒಮ್ಮೊಮ್ಮೆ ವಾಕ್ಯಗಳಲ್ಲಿ ಬಿಟ್ಟುಹೋಗಿದ್ದರೆ, ಇರುವ ಪದಗಳ ಅರ್ಥದ ಸಹಾಯದಿಂದ ಇರಬೇಕಾದ ಪದಗಳನ್ನು ಊಹಿಸಿ ಸೇರಿಸುವುದು ಆಧ್ಯಾಹಾರ.
() ವಾಕ್ಯದಲ್ಲಿ ಬರುವ ಪ್ರತಿಯೊಂದು ಪದವನ್ನು ಅದು ವ್ಯಾಕರಣದ ದೃಷ್ಟಿಯಿಂದ ಹೇಗೆ ರೂಪಸಿದ್ಧಿಯನ್ನು ಪಡೆಯಿತೆಂಬುದನ್ನು ಹೇಳುವುದು ರೂಪನಿಷ್ಪತ್ತಿಯೆನಿಸುವುದು.

ಅಭ್ಯಾಸ ಪ್ರಶ್ನೆಗಳು
(೧) ವಾಕ್ಯಗಳನ್ನು ಸ್ಥೂಲವಾಗಿ ಎಷ್ಟು ವಿಧಗಳಾಗಿ ವಿಂಗಡಿಸಬಹುದು?
(೨) ಸಾಮಾನ್ಯ ವಾಕ್ಯವೆಂದರೇನು?
(೩) ಸಂಯೋಜಿತ ವಾಕ್ಯವೆಂದರೇನು? ಉದಾಹರಣೆಯೊಂದಿಗೆ ವಿವರಿಸಿರಿ.
(೪) ಮಿಶ್ರವಾಕ್ಯಕ್ಕೆ ಒಂದು ಉದಾಹರಣೆ ಕೊಡಿರಿ.
(೫) ಆಧ್ಯಾಹಾರವೆಂದರೇನು? ಇವನು ನನ್ನ ಮಗ ಈ ವಾಕ್ಯದಲ್ಲಿ ಮಾಡಬೇಕಾದ ಆಧ್ಯಾಹಾರ ಪದವಾವುದು?
(೬) ಓಡಿಬಂದೆನು.  ಓಡಿಹೋಗು.  ಅವಸರದಿಂದ ಬಾ.  ನಾಳೆ ಹೋಗುವಿಯಂತೆ.  ನನಗೆ ನಾಲ್ಕು ಜನ ಮಕ್ಕಳು.  ಈ ವಾಕ್ಯಗಳಲ್ಲಿ ಯಾವ ಯಾವ ಪದಗಳನ್ನು ಆಧ್ಯಾಹಾರ ಮಾಡಬೇಕು?
(೭) ರಾಮನಿಗೆ ಅವಸರವಾಗಿತ್ತು; ಆದ್ದರಿಂದ ವೇಗವಾಗಿ ಓಡುತ್ತಿದ್ದನು; ಆಗ ಕಲ್ಲನ್ನೆಡವಿ ಬಿದ್ದನು; ಬಿದ್ದ ಕಾರಣದಿಂದ ಕಾಲು ಮುರಿಯಿತು. – ಈ ವಾಕ್ಯ ವೃಂದವನ್ನು ಎಂಥ ವಾಕ್ಯವೆನ್ನುತ್ತೀರಿ? ಏಕೆ? ವಿವರಿಸಿರಿ.
(೮) ನಾನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆನೆಂಬುದು ಈಗತಾನೆ ಬಂದ ಈ ಪತ್ರದಿಂದ ತಿಳಿಯಿತು. – ಈ ವಾಕ್ಯವು ಎಂಥ ವಾಕ್ಯ? ಏಕೆ? ವಿವರಿಸಿರಿ.
(೯) ರೂಪನಿಷ್ಪತ್ತಿಯೆಂದರೇನು? ರಾಮನು ಪುಸ್ತಕವನ್ನು ಓದುತ್ತಾನೆ ಈ ವಾಕ್ಯದಲ್ಲಿ ಬಂದಿರುವ ಪದಗಳ ರೂಪನಿಷ್ಪತ್ತಿಯನ್ನು ಹೇಳಿರಿ.
(೧೦)     (i) ಮಾಡು ಧಾತುವಿನ ವರ್ತಮಾನಕಾಲದ ಪ್ರಥಮ ಪುರುಷ, ಪುಲ್ಲಿಂಗ, ಏಕವಚನ ರೂಪ ಬರೆಯಿರಿ.
(ii) ತಿನ್ನು ಧಾತುವಿನ ಭೂತಕಾಲ ಮಧ್ಯಮಪುರುಷ ಏಕವಚನದ ರೂಪಸಿದ್ಧಿ ಹೇಗೆ?
(iii) ಮನೆ ಎಂಬ ವಸ್ತುವಾಚಕ ನಪುಂಸಕಲಿಂಗ ದ್ವಿತೀಯಾ ಬಹುವಚನ ರೂಪಸಿದ್ಧಿ ಹೇಗಾಗುವುದು?
(೧೧) ಕೆಳಗಿನ ವಾಕ್ಯಗಳು ತಪ್ಪಿನಿಂದ ಕೂಡಿವೆ.  ಆ ತಪ್ಪುಗಳನ್ನು ಸರಿಪಡಿಸಿ ಬರೆಯಿರಿ.
(i) ತಿಂದನು ಎಂಬುದು ತಿಂದು ಧಾತುವಿನ ಭವಿಷ್ಯತ್ ಕಾಲದ   ಪ್ರಥಮಪುರುಷ ಪುಲ್ಲಿಂಗಬಹುವಚನರೂಪ.
(ii) ಮಾಡುತ್ತೇನೆ ಎಂಬುದು ಮಾಡು ಧಾತುವಿನ ವರ್ತಮಾನ ಕಾಲ      ಪ್ರಥಮಪುರುಷಪುಲ್ಲಿಂಗ ಏಕವಚನರೂಪ.
(iii) ಹೊಲದಲ್ಲಿ-ಎಂಬುದು ಹೊಲದ ಎಂಬ ಅಕಾರಾಂತ ನಪುಂಸಕಲಿಂಗ ಪ್ರಕೃತಿಯ ತೃತೀಯಾ ವಿಭಕ್ತಿ ಬಹುವಚನರೂಪ.
(iv) ಚೆನ್ನಾಗಿ-ಎಂಬುದು ಒಂದು ನಾಮಪದ.
(೧೨) ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಆವರಣದಲ್ಲಿರುವ ಒಂದು ಸರಿಯುತ್ತರವನ್ನು ಆರಿಸಿ ಬರೆಯಿರಿ.
(i) ಮಾಡಿದನು ಎಂಬುದು ಮಾಡು ಧಾತುವಿನ ಭೂತಕಾಲ ………….. ಪುಲ್ಲಿಂಗ ಏಕವಚನ. (ಮಧ್ಯಮಪುರುಷ, ಉತ್ತಮಪುರುಷ, ಪ್ರಥಮಪುರುಷ)
(ii) ಕೊಳ್ಳುತ್ತಾನೆ-ಎಂಬುದು ಕೊಳ್ಳು ಧಾತುವಿನ …………. ಕಾಲದ ಪ್ರಥಮ ಪುರುಷ ಪುಲ್ಲಿಂಗ ಏಕವಚನ ರೂಪ.  (ವರ್ತಮಾನಕಾಲ, ಭೂತ, ಭವಿಷ್ಯತ್)
(iii) ಊರಿಗೆ-ಎಂಬ ಪದವು ಊರು ಎಂಬ ಉಕಾರಾಂತ ನಪುಂಸಕಲಿಂಗದ ………. ವಿಭಕ್ತಿ ಏಕವಚನ.  (ಪಂಚಮೀ, ಚತುರ್ಥೀ, ಸಪ್ತಮೀ)
(iv) ಮಾಡಲು ಎಂಬುದು ಮಾಡು ಧಾತುವಿನ ಮೇಲೆ ಅಲು ಎಂಬ ಪ್ರತ್ಯಯ ಬಂದು …………. ಎನಿಸಿದೆ.   (ಕೃದಂತಭಾವನಾಮ, ಕೃದಂತಾವ್ಯಯ, ಭಾವಕೃದಂತ)
(v) ಇಲ್ಲ ಎಂಬುದು ಒಂದು ನಿಷೇಧಾರ್ಥಕ ………. ಆಗಿದೆ. (ಧಾತು, ಕ್ರಿಯಾರ್ಥಕಾವ್ಯಯ, ಭಾವಕೃದಂತ)

7 ಕಾಮೆಂಟ್‌ಗಳು:

  1. ಸಾಪೇಕ್ಷ ಕ್ರಿಯಾಪದ ಸಂಯುಕ್ತ ಕ್ರಿಯಾಪದ ನಿರಪೇಕ್ಷ ಕ್ರಿಯೆ ಪದ ಮತ್ತು ಕುರಿತಂತ ಕಡೆಯ ಪದಗಳು ಅಂದರೇನು ಇವುಗಳನ್ನು ಹೇಗೆ ತಿಳಿಯುವುದು ಹಾಗೂ ಇವುಗಳ ಅರ್ಥ ಮತ್ತು ಉದಾಹರಣೆಗಳನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ
  2. ಒಂದು ವಾಕ್ಯವನ್ನು ಒಂದೇ ಪದದಲ್ಲಿ ತಿಳಿಸುವ search column ತಿಳಿಸಿ

    ಪ್ರತ್ಯುತ್ತರಅಳಿಸಿ
  3. ವಾಕ್ಯ ರಚನೆ ಹೇಗೆ ಮಾಡಬೇಕು.....ಉದಾ ಶಿವು ಹತ್ತನೆಯತರಗತಿಯನ್ನು ನಾಲ್ಕು ಸಲ ಪೇಲ್ ನಾಲ್ಕನೆ ಬಾರಿ ಪಾಸ್ ಆದ....‌ಈ ವಾಕ್ಯರಚನೆ ಸರಿಯಾಗಿ ಇದಿಯಾ? ಸರಿಪಡಿಸಿ

    ಪ್ರತ್ಯುತ್ತರಅಳಿಸಿ
  4. ಒಂದು ತಿಂಗಳ ಕರುಗಳು (ಕರುಗಳ) ಇಂದಿರೇಶನು ಮೇಯಿಸಲು, ಒಂದು ವರುಷದ ಕರುಗಳಂತೆ ಬೆಳೆದವು.

    ಈ ಮೇಲಿನ ವಾಕ್ಯದಲ್ಲಿ 'ಕರುಗಳು' ಎಂಬ ಪ್ರಯೋಗ ಸರಿಯಾದದ್ದೋ ಅಥವಾ 'ಕರುಗಳ' ಎಂಬ ಪ್ರಯೋಗ ಸರಿಯೋ?
    ದಯವಿಟ್ಟು ತಿಳಿಸಿಕೊಡಿ.

    ಪ್ರತ್ಯುತ್ತರಅಳಿಸಿ