ನನ್ನ ಪುಟಗಳು

27 ನವೆಂಬರ್ 2013

ಹೊಸಹಾಡು (ಪದ್ಯ-3)

ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಪರಿಚಯ:

 ಜನನ: ಜೂನ್ ೮, ೧೯೧೫         ನಿಧನ:  ಆಗಸ್ಟ್ ೯, ೨೦೧೫
        ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದವರು ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.
          ಕಯ್ಯಾರ ಕಿಞ್ಞಣ್ಣ ರೈ ಅವರು ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ನಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸಿದರು.
       ಶ್ರೀಯುತರು ಬದುಕಿ ಬಾಳಿದ್ದು ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದಲ್ಲಿ. ಹಾಗಾಗಿ ಕಯ್ಯಾರ ಇವರ ಹೆಸರಿನೊಂದಿಗೆ ಬೆಸೆದುಕೊಂಡಿತು.
           ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾ
              ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. 'ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್' 'ಸಾರೊ ಎಸಳ್ದ ತಾಮರೆ' 'ಲೆಪ್ಪುನ್ಯೇರ್?' 'ಬತ್ತನೊ ಈ ಬರ್ಪನೊ' - ಇವು ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ.
              ಪತ್ರಕರ್ತರಾಗಿ: ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯಕೃಷಿ

  • 'ಕಯ್ಯಾರ ಕಿಞ್ಞಣ್ಣ ರೈ' ಅವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.
  • ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ.
  • ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.
  • ಪಂಚಮಿ ಮತ್ತು ಆಶಾನ್‍ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ.
  • ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ.
  • ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ' ಕೃತಿಯನ್ನು ಬರೆದುಕೊಟ್ಟಿದ್ದಾರೆ.
  • ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ.
  • 'ವಿರಾಗಿಣಿ' ಎನ್ನುವುದು ಇವರು ಬರೆದ ನಾಟಕ.
  • 'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಆತ್ಮಕಥನ.
  • ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೇ ಐದು ಸಾವಿರದಷ್ಟಾಗುತ್ತದೆ.
ಗೌರವಪ್ರಶಸ್ತಿ/ಪುರಸ್ಕಾರಗಳು
  • ಸನ್.೧೯೬೯ ರಲ್ಲಿ ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ' ಲಭಿಸಿತು.
  • ಸನ್.೧೯೬೯ ರಲ್ಲಿ 'ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ' ಲಭಿಸಿತು.
  • ಸನ್.೧೯೮೫ ರಲ್ಲಿ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ದೊರೆಯಿತು.
  • ಕಯ್ಯಾರ ಕಿಞ್ಞಣ್ಣ ರೈಯವರು ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ' ೬೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು'.
  • ಸನ್.೨೦೦೫ ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆಯಿತು.
  • ಸನ್.೨೦೦೬ ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ,
  • ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಲಭಿಸಿವೆ.
  • ಪಂಪ ಪ್ರಶಸ್ತಿ.
ಕಯ್ಯಾರರ ಒಂದು ಜನಪ್ರಿಯ ಕವನ 
ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ
ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು
ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡ ಸಿರಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ



**************************************************************************
      ಹೊಸಹಾಡು ಪದ್ಯಬಾಗವನ್ನು ಕಯ್ಯಾರ ಕಿಞ್ಞಣ್ಣರೈ ಅವರ 'ಶತಮಾನದ ಗಾನ' ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

22 ಕಾಮೆಂಟ್‌ಗಳು:

  1. ತುಂಬಚನ್ನಾಗಿದೆ,ನಾನು ನನ್ನ ಪ್ರಾಥಮಿಕ ಶಾಲೆ ಯಲ್ಲಿ ಓದಿದ ನೆನಪು

    ಪ್ರತ್ಯುತ್ತರಅಳಿಸಿ
  2. ನಾನು 1955ರಲ್ಲಿ ನಮ್ಮಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದು ಪ್ರಾರಂಭಿಸಿದೆ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 1955 ರಿಂದ 1960ರ ವರೆಗೆ ಕಯ್ಯಾರ ಕಿಂಞಣ್ಣ ರೈ ಅವರ ಪಠ್ಯಪುಸ್ತಕ ಚಾಲ್ತಿಯಲ್ಲಿತ್ತು. ಆ ಪುಸ್ತಕಗಳ ಹೆಸರು ನನಗೆ ನೆನಪಿರುವಂತೆ 'ನೂತನ ಪಾಠಮಾಲೆ' ಎಂದಿತ್ತು. ಒಂದನೇ ತರಗತಿಗೆ ನೂತನ ಪಾಠಮಾಲೆ- 1, ಎರಡನೇ ತರಗತಿಗೆ ನೂತನ ಪಾಠಮಾಲೆ- 2 - ಹೀಗಿತ್ತು. ಹೈಸ್ಕೂಲ್ನಲ್ಲಿ ಹೇಗಿತ್ತು ಗೊತ್ತಿಲ್ಲ.
    1960ರ ಬಳಿಕ ಇಡೀ ರಾಜ್ಯಕ್ಕೆ ಒಂದೇ ರೀತಿಯ ಪಠ್ಯಪುಸ್ತಕ ಚಲಾವಣೆಗೆ ಬಂತು
    ಕಯ್ಯಾರರ ಪಠ್ಯ ಪುಸ್ತಕದಲ್ಲಿ ಒಳ್ಒಳ್ಳೆಯ ಪಾಠಗಳು ಚಿಕ್ಕ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಹ ಸುಂದರ ಕವನಗಳು ಇದ್ದವು. ಇಡೀ ಪುಸ್ತಕ ಅವರಿಂದಲೇ ತಯಾರಾದ ರೀತಿಯಲ್ಲಿ ಇದ್ದವು.
    ಅವುಗಳಲ್ಲಿ ಕೆಲವು ಕವನಗಳು ಈ ರೀತಿ ಇದ್ದವು-
    ಒಬ್ಬ ವೃತ್ತಾಕಾರದ ಟೊಪ್ಪಿ ಇಟ್ಟುಕೊಂಡು ಸೈಕಲಲ್ಲಿ ಬಂದು ಬಿದ್ದುದನ್ನು ಕವನದಲ್ಲಿ ಈ ರೀತಿ ಕೊನೆಗಳಿಸಿದ್ದರು - "ಸೈಕಲ್ ಅತ್ತ,ಟೊಪ್ಪಿ ಇತ್ತ ದರೆಯಮೇಲೆ ದೊರೆ"- ಒಂದನೇ ತರಗತಿಯ ಪುಸ್ತಕ. ಅಳಿಲೇ ಚನಿಲೇ ಇಳಿಯುವುದೇಕೋ ಮರವನು ಹತ್ತು...ನನಗೆ ಮಾವಿನ ಹಣ್ಣು ಕಿತ್ತು ಕೊಡು ಎನ್ನುವ ಒಂದು ಹಾಡು ಇತ್ತು.
    ಧರಣಿ ಮಂಡಲ ಮಧ್ಯದೊಳಗೆ- ಗೋವಿನ ಹಾಡು ಮೂರನೇ ತರಗತಿಯಲ್ಲಿ ಇತ್ತು. "ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು. ಮಂಗಗಳೆಲ್ಲವು ಒಟ್ಟಿಗೆ ಸೇರುತ ಒಂದಪವಾಸವ ಮಾಡಿದವು" ಮಂಗಗಳ ಉಪವಾಸ ಒಂದು ರಸಮಯ ಹಾಡಿತ್ತು.
    "ಬುದ್ಧನೊಂದು ಕಥೆಯ ಕೇಳಿ ತಿದ್ದಿಕೊಳ್ಳಿ ಬಾಲರೆಲ್ಲ ಬುದ್ಧಿಯನ್ನು ಕಲಿತು ಸುಪ್ರಭುದ್ಧರಾಗಿರಿ" - ಈ ಹಾಡು ನಾಲ್ಕನೇ ತರಗತಿಯಲ್ಲಿತ್ತು.
    ಚಿಕ್ಕ ಮಗುವೊಂದು ಬೆಳಿಗ್ಗೆ ನಿದ್ದೆಯಿಂದ ಎದ್ದು ತೀರಿಕೊಂಡ ಅಣ್ಣನೊಂದಿಗೆ ರಾತ್ರಿ ಕನಸಿನಲ್ಲಿ ಆಕಾಶದಲ್ಲೆಲ್ಲ ಸುತ್ತಾಡಿದುದನ್ನು ನೆನೆದು - ಎಲ್ಲಿ ಹೋದನಮ್ಮ ಬಾರನೇ ಇನ್ನು ಎಂದು ತಾಯನ್ನು ಕೇಳೋದು, ಮಗುವಿಗೆ ಸಮಾಧಾನ ಹೇಳಿ ತಾಯಿ ತೀರಿದ ಮಗುವನ್ನು ನೆನೆದು ದು:ಖಿಸುವ ಒಂದು ಹಾಡಿತ್ತು

    ಪ್ರತ್ಯುತ್ತರಅಳಿಸಿ