ನನ್ನ ಪುಟಗಳು

24 ನವೆಂಬರ್ 2013

ಅಲಂಕಾರ-ಅರ್ಥಾಲಂಕಾರಗಳು

ಅರ್ಥಾಲಂಕಾರಗಳು
() ಉಪಮಾಲಂಕಾರ
         ಈ ಕೆಳಗಿನ ಮಾತುಗಳನ್ನು ಗಮನಿಸಿರಿ.
(i) ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.
(ii) ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ.
    ಮೊದಲನೆಯ ವಾಕ್ಯದಲ್ಲಿ ಮಗುವಿನ ಮುಖದಲ್ಲಿನ ಅಹ್ಲಾದಕತ್ವವೂ, ಚಂದ್ರನಲ್ಲಿರುವ ಅಹ್ಲಾದಕತ್ವವೂ ಸಮಾನವಾಗಿರುವುದರಿಂದ ಮಗುವಿನ ಮುಖವನ್ನು ಚಂದ್ರನಿಗೆ ಹೋಲಿಸಿದೆ.  ಚಂದ್ರನನ್ನು ನೋಡಿದಾಗ ಉಂಟಾಗುವ ಮನೋಹರತ್ವವು ಮಗುವಿನ ಮುಖ ನೋಡಿದಾಗಲೂ ಆಗುತ್ತದೆ.  ಈ ಅರ್ಥ ಚಮತ್ಕಾರ ಆ ವಾಕ್ಯದಲ್ಲಿ ಅಡಗಿದೆ.
ಎರಡನೆಯ ವಾಕ್ಯದಲ್ಲಿ ಹಾವಿಗೆ ಹಾಲೆರೆದರೆ ವಿಷವೇ ವೃದ್ಧಿಯಾಗುವುದಲ್ಲದೆ ಬೇರಿಲ್ಲ.  ಇದರ ಹಾಗೆಯೇ ನೀಚರಿಗೆ ಉಪಕಾರ ಮಾಡಿದರೆ ಅವರು ಅಪಕಾರವನ್ನೇ ಮಾಡುವರಲ್ಲದೆ ಪ್ರತಿಯಾಗಿ ಉಪಕಾರ ಮಾಡುವುದಿಲ್ಲ.  ಇಲ್ಲಿ ನೀಚರಿಗೆ ಮಾಡಿದ ಉಪಕಾರವನ್ನು ಹಾವಿಗೆ ಹಾಲೆರೆಯುವ ಕ್ರಿಯೆಗೆ ಹೋಲಿಸಲಾಗಿದೆ.  ಹೀಗೆ ಬರುವ ಹೋಲಿಕೆಗಳಿಗೆ ‘ಉಪಮಾನ’ ವೆನ್ನುತ್ತಾರೆ.  ಯಾವುದಕ್ಕೆ ಈ ಹೋಲಿಕೆಯನ್ನು ಕೊಡುವೆವೋ ಅದು ‘ಉಪಮೇಯ’.  ಅಂತೆ ಹಾಗೆ-ಎಂದು ಹೋಲಿಕೆಗೆ ಸಂಬಂಧ ಕಲ್ಪಿಸುವ ಶಬ್ದಗಳು ಉಪಮಾವಾಚಕಗಳೆನಿಸುವುವು.  ಈ ಹೋಲಿಕೆಗಳಲ್ಲಿ ಬರುವ ಸಮಾನತೆಯೇ ಸಮಾನಧರ್ಮವೆನಿಸುವುದು.
ಉದಾಹರಣೆಗೆ:                                                ಮೊದಲನೆ ವಾಕ್ಯದಲ್ಲಿ
(೧)ಮಗುವಿನ ಮುಖಉಪಮೇಯ
(೨)ಚಂದ್ರಉಪಮಾನ
(೩)ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವಸಮಾನಧರ್ಮ, (ಸಾಧಾರಣಧರ್ಮ)
(೪)ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇಉಪಮಾವಾಚಕ
ಎರಡನೆಯ ವಾಕ್ಯದಲ್ಲಿ
(೧)ನೀಚರಿಗೆ ಮಾಡಿದ ಉಪಕಾರಉಪಮೇಯ
(೨)ಹಾವಿಗೆ ಹಾಲೆರೆಯುವಿಕೆಉಪಮಾನ
(೩)ಹಾವಿನಲ್ಲಿ ವಿಷಹೆಚ್ಚುವಿಕೆ ನೀಚರಿಂದ ಅಪಕಾರವಾಗುವಿಕೆ- ಎಂಬ ಎರಡರಿಂದಲೂ ಪರಿಣಾಮದಲ್ಲಿ ಅಪಕಾರವಾಗುವಿಕೆಸಮಾನಧರ್ಮ (ಸಾಧಾರಣಧರ್ಮ)
(೪)ಹಾಲೆರದಂತೆ ಎಂಬಲ್ಲಿ ಬಂದಿರುವ ಅಂತೆ ಎಂಬುದುಉಪಮಾವಾಚಕ ಶಬ್ದ
ಹೀಗೆ ಈ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಉಪಮಾವಾಚಕ – ಈ ನಾಲ್ಕೂ ಬಂದಿದ್ದರೆ ಅದು ಪೂರ್ಣೋಪಮಾಲಂಕಾರವೆನಿಸುವುದು[1].  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಉಪಮಾಲಂಕಾರ:- "ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುವುದು"[2]. (ಹೋಲಿಕೆಯೆಂದರೆ ಆಕರ್ಷಕವಾದ ಹೋಲಿಕೆ)
ಉದಾಹರಣೆ :- (i)
ಬಿರುಗಾಳಿಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ| ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದಮುನ್ನ ಹಮ್ಮೈಸಿಬಿದ್ದಳಂಗನೆ ಧರೆಗೆ ನಡುನಡುಗುತ||
(-ಜೈಮಿನಿ ಭಾರತ)
(ಶ್ರೀರಾಮಚಂದ್ರನ ಮಾತಿನಂತೆ ಸೀತಾದೇವಿಯನ್ನು ಕಾಡಿಗೆ ಬಿಟ್ಟುಬರಲು ಹೋದ ಲಕ್ಷ್ಮಣನು ಶ್ರೀರಾಮನ ಅಪ್ಪಣೆಯನ್ನು ಸೀತಾದೇವಿಗೆ ತಿಳಿಸಿದ ಸಂದರ್ಭದಲ್ಲಿ ನಡೆದ ಘಟನೆಯಿದು.)
ಅರ್ಥ:-ಬಿರುಗಾಳಿ ಬೀಸಲಾಗಿ, ಗೊನೆಬಿಟ್ಟ ಬಾಳೆ ಮರವು ಅಲ್ಲಾಡಿ ಮುರಿದು ಭೂಮಿಗೆ ಬೀಳುವಂತೆ ತುಂಬು ಗರ್ಭಿಣಿಯಾದ ಸೀತಾದೇವಿಯು ಲಕ್ಷ್ಮಣನ ಮಾತು ಕರ್ಣಪಟಲ (ಕಿವಿದೆರೆ) ಕ್ಕೆ ಬೀಳದ ಮುನ್ನ ಹಮ್ಮೈಸಿ ನಡುನಡುಗಿ ಭೂಮಿಗೆ ಬಿದ್ದಳು.
ಇಲ್ಲಿ ಭೂಮಿಗೆ ಬಿದ್ದ ಸೀತಾದೇವಿ ಉಪಮೇಯ’ ಫಲಿತ ಬಾಳೆಯ ಮರ ಉಪಮಾನ’ ಧರೆಗೆ ಬೀಳುವಿಕೆಯೇ ಸಾಧಾರಣಧರ್ಮ’ (ಸಮಾನಧರ್ಮ).  ‘ಅಂತೆ’ ಎಂಬುದೇ ಉಪಮಾವಾಚಕ.  ಆದುದರಿಂದ ಇದು ಪೂರ್ಣೋಪಮಾಲಂಕಾರವಾಯಿತು.
ಉದಾಹರಣೆ:- (ii)
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ|
ಬಾಡಿಗೆಯೆತ್ತು ದುಡಿದಂಗ| ಬಾಳೆಲೆಯ|
ಹಾಸ್ಯುಂಡು ಬೀಸಿ ಒಗೆದಂಗ||
(-ಜಾನಪದ ಸಾಹಿತ್ಯದಿಂದ)
ಅರ್ಥ:- ಬಾಲಕರಿಲ್ಲದ ಬಾಲೆಯ ಜನ್ಮವೇತರದು? ಬಾಡಿಗೆ ಎತ್ತು ದುಡಿದ ಹಾಗೆ.  ಮತ್ತು ಬಾಳೆಯೆಲೆಯನ್ನು ಹಾಸಿ ಊಟಮಾಡಿ ಬೀಸಿ ಒಗೆದ ಹಾಗೆ.  ಇಲ್ಲಿ ಮಕ್ಕಳಿಲ್ಲದ ಹೆಣ್ಣುಮಗಳಿಗೆ ಬಾಡಿಗೆ ಎತ್ತಿನ ದುಡಿಮೆಗೂ, ಬಾಳೆಯ ಎಲೆಯನ್ನು ಹಾಸಿ ಊಟಮಾಡಿ ಬಿಸಾಡುವಿಕೆಗೂ ಎರಡು ಹೋಲಿಕೆಗಳನ್ನು ಕೊಡಲಾಗಿದೆ.  ಇದೂ ಉಪಮಾಲಂಕಾರ.

() ರೂಪಕಾಲಂಕಾರ[3]
ಮಾತನಾಡುವಾಗ ಒಮ್ಮೊಮ್ಮೆ ಹೀಗೆ ಹೇಳುವುದುಂಟು.
(i) ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
(ii) ಆ ಮನುಷ್ಯ ನಿಜವಾಗಿ ದೇವರು.
(iii) ಈ ಶಾಲೆಗೆ ವಿದ್ಯಾರ್ಥಿಯೊಂದು ರತ್ನ.
(೧) ಇಲ್ಲಿ ಮೊದಲ ವಾಕ್ಯದಲ್ಲಿ-ವಿದ್ವಾಂಸನೂ ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಭೇದವಿಲ್ಲದೆ ಹೇಳಲಾಗಿದೆ.
(೨) ಎರಡನೆಯ ವಾಕ್ಯದಲ್ಲಿ-ಮನುಷ್ಯನೂ, ದೇವರೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಿದೆ.
(೩) ಮೂರನೆಯ ವಾಕ್ಯದಲ್ಲಿ-ವಿದ್ಯಾರ್ಥಿಯೂ ರತ್ನವೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಲಾಗಿದೆ.
ಇಲ್ಲಿ ಮೂರೂ ವಾಕ್ಯಗಳಲ್ಲಿ ಒಂದರಂತೆ ಇನ್ನೊಂದಿದೆ ಎಂದು ಹೇಳಿಲ್ಲ.  ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.  ಇಲ್ಲಿ ಅಭೇದದಿಂದ ಹೇಳಿರುವುದರಿಂದ ಇದು ‘ಅಭೇದ ರೂಪಕ’ ವೆಂದು ಹೇಳಲ್ಪಡುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಅಭೇದರೂಪಕಾಲಂಕಾರ:- ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆ, ಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದರೂಪಕಾಲಂಕಾರವೆನಿಸುವುದು.
ಉದಾಹರಣೆ:-
(i) ಪುರದಪುಣ್ಯಂ ಪುರುಷರೂಪಿಂದ ಪೋಗುತಿದೆ|ಪರಿಜನದ ಭಾಗ್ಯವಡವಿಗೆ ನಡೆಯುತಿದೆ||
                          
(-ಹರಿಶ್ಚಂದ್ರ ಕಾವ್ಯ)
ಈ ಪದ್ಯಭಾಗವು-ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ತನ್ನ ರಾಜ್ಯಾದಿಗಳನ್ನು ಕೊಟ್ಟು, ಪಟ್ಟಣ ಬಿಟ್ಟು ಹೋಗುವಾಗ ಅಯೋಧ್ಯಾನಗರದ ಜನರು ಗೋಳಿಡುವ ಸನ್ನಿವೇಶದ್ದು.
ಅರ್ಥ:- ಪುರದ ಪುಣ್ಯವು ಪುರುಷಾಕಾರದಿಂದ ಹೋಗುತ್ತಿದೆ.
ಸೇವಕ ಜನದ ಭಾಗ್ಯವು ಅಡವಿಗೆ ಹೋಗುತ್ತಿದೆ.
ಇಲ್ಲಿ ಹರಿಶ್ಚಂದ್ರನೆಂಬ ಉಪಮೇಯವೂ ಪುರದ ಪುಣ್ಯವೆಂಬ ಉಪಮಾನವೂ ಒಂದೇ ಎಂದೂ, ಎರಡನೆಯ ವಾಕ್ಯದಲ್ಲಿ ಹರಿಶ್ಚಂದ್ರನೆಂಬ ಉಪಮಾನವೂ ಪರಿಜನರ ಭಾಗ್ಯವೆಂಬ ಉಪಮಾನವೂ ಒಂದೇ ಎಂದೂ ಉಪಮಾನೋಪಮೇಯಗಳಲ್ಲಿ ಭೇದವಿಲ್ಲದೆ ಅಂದರೆ ಅಭೇದವಾಗಿ ವರ್ಣಿಸಿರುವುದರಿಂದ ಇದು ಅಭೇದರೂಪಕಾಲಂಕಾರವೆನಿಸಿತು.  ಇದರಂತೆ-
ಉದಾಹರಣೆ:-
(ii) ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ|
ವಿನಿಯನೂಳಿಗ ದೇವಪೂಜೆ||
ಮನನವಿವನ ನೆನೆವುದೆ ಸಾಧ್ವಿಯರಿಗೆ|
ಮುನಿಸತಿಯರ ಮೋಡಿಯೇನು?
(-ಹದಿಬದೆಯ ಧರ್ಮ)
ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡೆವಳಿಕೆಯು ವರ್ಣಿತವಾಗಿದೆ.
ಅರ್ಥ:- ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದು ದೇವರಧ್ಯಾನ.
ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ.  ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ-ದೇವರ ಪೂಜೆ ಇವೆರಡೂ ಒಂದೇ-ಇತ್ಯಾದಿಯಾಗಿ ಉಪಮೇಯ-ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಅಭೇದರೂಪಕಾಲಂಕಾರವೆನಿಸಿತು.

() ಉತ್ಪ್ರೇಕ್ಷಾಲಂಕಾರ[4]
ಲವಕುಶರು ಶ್ರೀರಾಮಲಕ್ಷ್ಮಣರೊಡನೆ ಯದ್ಧಕ್ಕೆ ತೊಡಗಿದಾಗಿನ ರಾಮಾಶ್ವಮೇಧದಲ್ಲಿನ ಪ್ರಸಂಗದ ವರ್ಣನೆಯನ್ನು ಈ ಕೆಳಗೆ ನೋಡಿರಿ.
“ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹರಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು.”
(-ರಾಮಾಶ್ವಮೇಧದಲ್ಲಿನ ವರ್ಣನೆಯ ಹೊಸಗನ್ನಡರೂಪಾಂತರ)
ಇಲ್ಲಿ ಸತ್ತು ಬಿದ್ದ ಆನೆಗಳು ರಣರಂಗದ ಸುತ್ತೆತ್ತಲೂ ಹರಡಿ ಬಿದ್ದಿದ್ದವು.  ರಣರಂಗವೆಲ್ಲ ರಕ್ತಮಯವಾಗಿತ್ತು.  ಈ ಸನ್ನಿವೇಶವನ್ನು ಕವಿ ಬೇರೊಂದು ರೀತಿಯಲ್ಲಿ ಕಲ್ಪಿಸಿಕೊಂಡನು (ಸಂಭಾವಿಸಿದನು).  ರಾಮಲಕ್ಷ್ಮಣರು ಹಿಂದೆ ಸಮುದ್ರಕ್ಕೆ ಸೇತುವೆ ಕಟ್ಟಲು ಬೆಟ್ಟಗಳನ್ನು ಕಿತ್ತು ತಂದು ಹರಡಿಸಿದ್ದರೆಂಬ ಪ್ರಸಿದ್ಧಾಂಶವನ್ನು ಜ್ಞಾಪಿಸಿಕೊಂಡ ಕವಿ, ಈಗ ಅವನ ಮಕ್ಕಳೇ ಆದ ಲವಕುಶರು ರಕ್ತದ ಸಮುದ್ರಕ್ಕೆ ಸೇತುವೆ ಕಟ್ಟಲು ಚಿಕ್ಕ ಚಿಕ್ಕ ಬೆಟ್ಟಗಳನ್ನು ತರಿಸಿ ಹರಡಿಸಿರುವರೋ-ಎನ್ನುವ ಹಾಗೆ ರಕ್ತಮಡುವಿನಿಂದ ಕೂಡಿದ ರಣರಂಗದಲ್ಲಿ ಸತ್ತು ಬಿದ್ದು ಸುತ್ತಲೂ ಹರಡಿಕೊಂಡಿರುವ ಆನೆಗಳು ಕಂಡವೆಂದು ಕಲ್ಪಿಸಿ ಹೇಳಿದ್ದಾನೆ.  ಹೀಗೆ ಕವಿ ಕಲ್ಪಿತಜ್ಞಾನದಿಂದ ಹೇಳುವುದು ಉತ್ಪ್ರೇಕ್ಷೆಯೆನಿಸುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
 ಉತ್ಪ್ರೇಕ್ಷಾಲಂಕಾರ:- "ಒಂದಾನೊಂದು ಪದಾರ್ಥವನ್ನೋ, ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದೇ ಉತ್ಪ್ರೇಕ್ಷೆಯೆನಿಸುವುದು."
ಆದರೆ ವರ್ಣಿಸುವ ವಸ್ತುವಿನಲ್ಲಿ ಅಥವಾ ಸನ್ನಿವೇಶದಲ್ಲಿ ಸಂಭಾವನೆ ಮಾಡುವ (ಕಲ್ಪಿಸಿಕೊಳ್ಳುವ) ವಸ್ತುವಿನ ಧರ್ಮವು ಇದ್ದೇ ಇರಬೇಕು.
ಉದಾಹರಣೆ:- (i)
ಆಸೇನಾರಜದಿಂ ಪರಿಧೂಸರಮಾದುದು ನಿಜಾಂಗಮಂ ತೊಳೆಯಲ್ಕೆಂದೋಸರಿಸದೆ ಪೊಕ್ಕಂತಿರೆವಾಸರಕರನಪರ ವಾರಿನಿಧಿಯಂ ಪೊಕ್ಕಂ||
                                  (-ಕನ್ನಡ ಕೈಪಿಡಿ)
ಇದೊಂದು ಯದ್ಧ ಸಮಯದ ಸಾಯಂಕಾಲದ ವರ್ಣನೆ.
ಅರ್ಥ:- ಸೇನೆಯ ಕಾಲ್ತುಳಿತದಿಂದ ಎದ್ದ ಧೂಳು ಮೈಗೆ ಮೆತ್ತಲಾಗಿ, ಅಂಥ ಕೆಂಪು ಧೂಳಿನಿಂದ ಧೂಸರವಾದ ತನ್ನ ದೇಹವನ್ನು ತೊಳೆಯುವುದಕ್ಕೋಸುಗ ಪಶ್ಚಿಮ ಸಮುದ್ರವನ್ನು ಸೂರ‍್ಯನು ಹೊಕ್ಕನು.
ಸಹಜವಾಗಿ ಮುಳುಗಿದ ಸೂರ‍್ಯನನ್ನು, ಕವಿ ಸ್ನಾನಕ್ಕೋಸುಗವೇ ಪಶ್ಚಿಮ ಸಮುದ್ರಕ್ಕೆ ಮುಳುಗಿದನೆಂದು ಕಲ್ಪಿಸಿ ಹೇಳಿದ್ದಾನೆ.
ಸಾಯಂಕಾಲದಲ್ಲಿ ಸೂರ‍್ಯನ ಬಣ್ಣ ಕೆಂಪಾಗಿರುತ್ತದೆ ಮತ್ತು ಪಶ್ಚಿಮದಲ್ಲಿ ಅವನು ಮರೆಯಾಗುತ್ತಾನೆ.  ಆದ್ದರಿಂದ ಕಲ್ಪಿಸಿ ಹೇಳುವ ಧೂಳುಮೆತ್ತಿ ಕೆಂಪಾದ ಮೆಯ್ಯಿ, ಪಶ್ಚಿಮದಲ್ಲಿರುವ ಸಮುದ್ರದಲ್ಲಿ ಕಾಣದಾಗುವನೆನ್ನುವಲ್ಲಿನ ಧರ್ಮವು ಇದೆ.  ಆದ್ದರಿಂದ ಇದು ಉತ್ಪ್ರೇಕ್ಷಾಲಂಕಾರವೆನಿಸಿತು.
ಉದಾಹರಣೆ:-
(iii) ಪಾಲ್ದುಂಬಿದ ಸಾಲ್ದೆನೆಗಳ|
ನೆಲ್ದುರುಗಲನೊಲ್ದು ಸೀಳಿಗಿಳಿಭಯ ಭರದಿಂ||
ಜೋಲ್ದಿಳೆಗಿಳಿವಂತಿರಬಂ|
ಬಲ್ದೆರೆಯೊಳ್ ಪೊಳೆದು ಮಡಿಯ ನೀರೋಳ್ ತೋರ್ಕುಂ||
                                         (-ರಾಜಶೇಖರ ವಿಳಾಸ)
ಗದ್ದೆಯಲ್ಲಿ ನೀರಿದೆ.  ಆ ನೀರಿನಲ್ಲಿ ಬತ್ತದ ತೆನೆಗಳ ಪ್ರತಿಬಿಂಬ ಕಾಣುತ್ತಿದೆ.
ಅರ್ಥ:- ಹಾಲುತುಂಬಿದ ಸಾಲುಸಾಲಾಗಿ ಕಾಣುವ ಬತ್ತದ ತೆನೆಗಳು ತಮ್ಮನ್ನು ಗಿಳಿಗಳು ಬಂದು ಸೀಳಿಬಿಡುತ್ತವೆಂಬ ಭಯದಿಂದ ಭೂಮಿಗೆ ಇಳಿದುಹೋದವೋ ಎಂಬಂತೆ ಗದ್ದೆಯ ನೀರಿನಲ್ಲಿ ಅವು ಪ್ರತಿಫಲಿಸಿ ಕಾಣುತ್ತಿದ್ದವು.
ಇಲ್ಲಿ ಸಹಜವಾಗಿ ನೀರಿನಲ್ಲಿ ಪ್ರತಿಫಲಿಸಿ ಕಾಣುವ ಬತ್ತದ ತೆನೆಗಳ ಆ ಸನ್ನಿವೇಶವನ್ನು ಕವಿಯು ಬೇರೊಂದು ಕಾರಣ ಕೊಟ್ಟು ಕಲ್ಪಿಸಿ ಗಿಳಿಗಳ ಭಯದಿಂದ ಅವು ಭೂಮಿಗೆ ಇಳಿದು ಹೋಗಿವೆ ಎಂದು ಸಂಭಾವನೆ ಮಾಡಿ ಹೇಳುವ ಇದು ಉತ್ಪ್ರೇಕ್ಷಾಲಂಕಾರವಾಗುವುದು.

() ದೃಷ್ಟಾಂತಾಲಂಕಾರ[5]

(i) ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.
(ii) ಅಟ್ಟಮೇಲೆ ಒಲೆ ಉರಿಯಿತು; ಕೆಟ್ಟಮೇಲೆ ಬುದ್ಧಿಬಂತು.
(iii) ಮಾತುಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ.
ಇತ್ಯಾದಿಯಾಗಿ ಹೇಳುವ ನಾಣ್ಣುಡಿಗಳನ್ನು ವಿಚಾರ ಮಾಡಿದರೆ, ಮೊದಲನೆಯ ವಾಕ್ಯದಲ್ಲಿ ಊರಿಗೆ ಉಪಕಾರ ಮಾಡುವುದೂ, ಹೆಣಕ್ಕೆ ಶೃಂಗಾರಮಾಡುವುದೂ ಒಂದೇ.  ಎರಡನೆಯ ವಾಕ್ಯದಲ್ಲಿ ಅಡಿಗೆಯಾದ ಮೇಲೆ ಒಲೆ ಉರಿಯಹತ್ತಿತು.  ಮನುಷ್ಯ ಕೆಟ್ಟ ಮೇಲೆ ಬುದ್ಧಿ ಬಂತು.  ಮೂರನೆಯ ವಾಕ್ಯದಲ್ಲಿ ಮಾತಿನ ಮಹತ್ವ ತಿಳಿದವನು ಜಗಳ ಮಾಡಬೇಕಾದ ಪ್ರಮೇಯವೇ ಇಲ್ಲ; ಊಟದ ಮರ್ಮವರಿತವನು ರೋಗದಿಂದ ನರಳುವ ಭಯವಿಲ್ಲ.  ಇತ್ಯಾದಿಯಾಗಿ ಎರಡೆರಡು ಮಾತುಗಳು ಅರ್ಥದ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬಗಳಂತೆ ಕಾಣುತ್ತವೆ.  ಬಿಂಬ ಪ್ರತಿಬಿಂಬವೆಂದರೆ ತಾನು ಮತ್ತು ಕನ್ನಡಿಯಲ್ಲಿ ಕಾಣುವ ತನ್ನ ಪ್ರತಿಬಿಂಬವಿದ್ದ ಹಾಗೆ.  ಹೀಗೆ ವರ್ಣಿಸುವ ವಿಷಯಕ್ಕೆ ಬೇರೊಂದು ವಿಷಯದ ದೃಷ್ಟಾಂತವು ಪ್ರತಿಬಿಂಬದ ಹಾಗೆ ಕಾಣುವಂತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ದೃಷ್ಟಾಂತಾಲಂಕಾರ:- "ಎರಡು ಬೇರೆ ಬೇರೆ ವಾಕ್ಯಗಳು (ವರ್ಣಿಸುವ ವಿಷಯದ ವಾಕ್ಯ ಅವರ್ಣ್ಯವಿಷಯ ವಾಕ್ಯಗಳು) ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ (ಒಂದರ ಪ್ರತಿಬಿಂಬ ಮತ್ತೊಂದೆನ್ನುವ ಭಾವದಂತೆ) ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು."
ಉದಾಹರಣೆ:-
(i) ನಿಂದಿಸುವರ್ ದುರ್ಜನರ್ ಎಂ|ಬೊಂದುಭಯಂಬೆತ್ತು ಸುಕವಿರಚಿಸನೆಕೃತಿಯಂ?||ಮಂದೇಹರಭಯದಿಂದರ|ವಿಂದಸಖಂ ನಿಜಮಯೂಖನಂ ಪ್ರಸರಿಸನೇ?||
                        
(-ರಾಜಶೇಖರ ವಿಲಾಸ)
ಅರ್ಥ:- ದುರ್ಜನರು ನಿಂದಿಸುತ್ತಾರೆ ಎಂಬ ಹೆದರಿಕೆಯಿಂದ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸುವುದಿಲ್ಲವೆ? ಅಂದರೆ ರಚಿಸಿಯೇ ರಚಿಸುತ್ತಾನೆ.  ಕತ್ತಲೆಯ ಭಯದಿಂದ ಸೂರ‍್ಯನು ತನ್ನ ಕಿರಣಗಳನ್ನು ಪ್ರಸರಿಸುವುದಿಲ್ಲವೆ? ಅಂದರೆ ಪ್ರಸರಿಸಿಯೇ ಪ್ರಸರಿಸುತ್ತಾನೆ.
ಇಲ್ಲಿ-ದುರ್ಜನರು ನಿಂದೆ ಮಾಡುತ್ತಾರೆಂಬ ಹೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಸತ್ಕವಿಯಾದವನು ಕೃತಿ ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ, ಕತ್ತಲೆಯ ಹೆದರಿಕೆಯಿಂದ ಸೂರ‍್ಯನು ಸುಮ್ಮನಿರದೆ ತನ್ನ ಕಿರಣಗಳನ್ನು ಪ್ರಸರಿಸಿಯೇ ಪ್ರಸರಿಸುತ್ತಾನೆ-ಎಂಬ ಮಾತಿಗೂ ಅರ್ಥ ಸಾದೃಶ್ಯದಿಂದ ಬಿಂಬಪ್ರತಿಬಿಂಬ ಭಾವವು ಉಪಮೇಯ-ಉಪಮಾನಗಳೆರಡಕ್ಕೂ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.  ಇದರ ಹಾಗೆಯೇ-
ಉದಾಹರಣೆ:-
(ii) ಎನಿತೊಳವಪಾಯ ಕೋಟಿಗ|
ಳನಿತರ್ಕಂ ಗೇಹಮಲ್ತೆ ದೇಹಮಿದಂನೆ|
ಟ್ಟನೆ ಪೊತ್ತು ಸುಖವನರಸುವ|
ಮನುಜಂ ಮೊರಡಿಯೊಳೆ ಮಾದುಫಳಮನರಸದಿರಂ||
                                   (-ಯಶೋಧರ ಚರಿತೆ)
ಅರ್ಥ:- ಅಪಾಯಗಳೆಷ್ಟಿವೆಯೋ ಅಷ್ಟೆಲ್ಲಕ್ಕೂ ಮನೆಯಂತಿರುವ ಈ ದೇಹವನ್ನು ಧರಿಸಿ ಸುಖವೇ ಬೇಕು; ದುಃಖವು ಬೇಡ; ಎನ್ನುವ ಮನುಷ್ಯನು ಕಲ್ಲು ಮೊರಡಿಯಲ್ಲಿ ಮಾದಳ ಫಲವನ್ನು ಅರಸದೆ ಇರುವನೇ?
ಇಲ್ಲಿ-ಅನೇಕ ಅಪಾಯಗಳನ್ನು ಪಡೆಯುವುದಕ್ಕೆ ಕಾರಣವಾದ ಈ ದೇಹವನ್ನು ಧರಿಸಿ ಕೇವಲ ಸುಖವೇ ಬೇಕು ಎನ್ನುವ ಮನುಷ್ಯನೂ, ಕಲ್ಲುಮೊರಡಿಯ ಪ್ರದೇಶದಲ್ಲಿ ಮಾದಳ ಹಣ್ಣನ್ನು ಹುಡುಕುವ ಮನುಷ್ಯನೂ ಒಂದೇ.  ಏಕೆಂದರೆ ಕಲ್ಲುಮೊರಡಿಯಲ್ಲಿ ಮಾದಳ ಫಲವು ಸಿಗದು.  ಅದರಂತೆ ಮನುಷ್ಯ ದೇಹಕ್ಕೂ ಅಪಾಯಗಳು ಅನಿವಾರ‍್ಯ.  ಅವು ಬಂದೇ ಬರುತ್ತವೆ.  ಹೀಗೆ ಉಪಮೇಯ-ಉಪಮಾನ ವಾಕ್ಯಗಳಿಗೆ ಬಿಂಬ ಪ್ರತಿಬಿಂಬಭಾವ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.

(೫) ಅರ್ಥಾಂತರನ್ಯಾಸಾಲಂಕಾರ[6]
(i) ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ?
(ii) ಆತನು ಉಂಡಮನೆಗೆ ಕೇಡುಬಗೆದನು; ಕೃತಘ್ನರು ಏನನ್ನು ತಾನೆ ಮಾಡುವುದಿಲ್ಲ?
ಇತ್ಯಾದಿಯಾಗಿ ಮಾತನಾಡುವುದುಂಟು.  ಇಲ್ಲಿ ಮೊದಲನೆಯ ವಾಕ್ಯದಲ್ಲಿ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ ಉತ್ತೀರ್ಣನಾದನು ಎಂದು ವರ್ಣಿಸುವ ವಿಶೇಷ ವಾಕ್ಯವನ್ನು-ಲೋಕದಲ್ಲಿ ಎಲ್ಲ ಬುದ್ಧಿವಂತ ಮಕ್ಕಳಿಗೂ ಅನ್ವಯವಾಗುವಂಥ ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ? ಎಂಬ ಸಾಮಾನ್ಯ ನುಡಿಯಿಂದ ಸಮರ್ಥನೆ ಮಾಡಿದೆ.  ಅದರಂತೆ, ಎರಡನೆಯ ವಾಕ್ಯದಲ್ಲಿಯೂ ಕೂಡ ಉಂಡಮನೆಗೆ ಕೇಡು ಬಗೆದನು ಎಂಬ ಈ ವರ್ಣ್ಯವಾದ ಮಾತನ್ನು ಕೃತಘ್ನತಾ ಬುದ್ಧಿಯುಳ್ಳ ಜನಗಳು ಏನನ್ನು ತಾನೆ ಮಾಡುವುದಿಲ್ಲ? ಅಂದರೆ-ಎಲ್ಲ ಕೆಡುಕನ್ನು ಮಾಡುತ್ತಾರೆಂಬ ಲೋಕ ಸಾಮಾನ್ಯ ಮಾತಿನಿಂದ ಸಮರ್ಥನೆ ಮಾಡಿ ಹೇಳುವುದುಂಟು.  ಇದರ ಹಾಗೆಯೇ ಈ ಕೆಳಗಿನ ಮಾತನ್ನು ನೋಡಿರಿ.
“ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆಭಕ್ತನಾದ ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ ಪರಮಾತ್ಮನು ಕಾಪಾಡಿದನು.”
ಈ ಮಾತಿನಲ್ಲಿ ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ ಎಂಬುದು ಸಾಮಾನ್ಯ ವಾಕ್ಯ; ಏಕೆಂದರೆ ಎಲ್ಲ ಪರಮಾತ್ಮನ ಭಕ್ತರಿಗೂ ಅನ್ವಯವಾಗುವ ಮಾತು ಅದು.  ಈ ಸಾಮಾನ್ಯವಾದ ಮಾತನ್ನು ಭಕ್ತನಾದ ಪ್ರಹ್ಲಾದನಿಗೆ ಗಂಡಾಂತರ ಪ್ರಾಪ್ತವಾದಾಗ ಪರಮಾತ್ಮನು ಸಂರಕ್ಷಿಸಿದನೆಂಬ ವಿಶೇಷ ವಾಕ್ಯದಿಂದ ಈ ಮಾತಿನಲ್ಲಿ ಸಮರ್ಥನೆ ಮಾಡಲಾಗಿದೆ.  ಹೀಗೆ ಅರ್ಥ ಚಮತ್ಕಾರದಿಂದ ವರ್ಣಿಸುವ ಅಲಂಕಾರವೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು.  ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಅರ್ಥಾಂತರನ್ಯಾಸಾಲಂಕಾರ:- "ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು. (ಅಲ್ಲಿ ಸಾಮಾನ್ಯವಾಕ್ಯ ವಿಶೇಷ ವಾಕ್ಯಗಳೆರಡೂ ಉಕ್ತವಾಗಿರಬೇಕು)"[7]
ಉದಾಹರಣೆಗೆ:
(i) ಎನಗೆ ಹಿತಂ ಬ್ರಾಹ್ಮಣ ನೀ-|
ತನೆನ್ನದೆ ಅವಿವೇಕಿಯಾಗಿ ಶಿವಭೂತಿ ತೊ-|
ಟ್ಟನೆ ಬಗೆದನಹಿತಮಂ|
ತದ್ವನಚರಂ ಎಂತುಂ ಕೃತಘ್ನರೇನಂ ಮಾಡರ್?
                                    (-ಕರ್ಣಾಟಕ ಪಂಚತಂತ್ರ)
ಅರ್ಥ:- ನನಗೆ ಈ ಬ್ರಾಹ್ಮಣನು ಹಿತವನ್ನುಂಟುಮಾಡಿದವನು, ಎಂದು ಯೋಚಿಸದೆ ಆ ಬೇಡನು ಒಮ್ಮೆಲೆ ಅವನಿಗೆ ಕೇಡನ್ನು ಬಗೆದನು.  ಕೃತಘ್ನರಾದವರು ಏನನ್ನು ತಾನೆ ಮಾಡುವುದಿಲ್ಲ?
ಇಲ್ಲಿ ವರ್ಣಿಸಲ್ಪಡುವ ವಿಷಯವಾದ ಬೇಡನು ಬ್ರಾಹ್ಮಣನಿಗೆ ಅಹಿತವನ್ನು ಯೋಚಿಸಿದ ವಿಶೇಷ ವಿಷಯವನ್ನು -ಕೃತಘ್ನರಾದವರು ಏನೆಲ್ಲವನ್ನೂ ಮಾಡುತ್ತಾರೆ ಎಂಬ ಲೋಕಸಾಮಾನ್ಯವಾದ ಪ್ರಸಿದ್ಧ ವಿಷಯದಿಂದ ಸಮರ್ಥನೆ ಮಾಡಿದುದರಿಂದ ಇದು ಅರ್ಥಾಂತರನ್ಯಾಸಾಲಂಕಾರವಾಗುವುದು.  ಇಲ್ಲಿ ವಿಶೇಷವು ಸಾಮಾನ್ಯದಿಂದ ಸಮರ್ಥಿತವಾಗಿದೆ.
ಉದಾಹರಣೆ:
(ii) [8]ದೊರೆಯೊಳ್ಸೆಣಸುಗೆ ತನ್ನಿಂ|
ಪಿರಿಯರೊಳುರವಣಿಸಿ ಪೊಣರ್ದೊಡೆ ಅಳಿವುದು ದಿಟಮೀ|
ನರಪತಿಯೊಳ್ ಪೊಣರ್ದು ಅಳಿದರ್||
ಪರಿಕಿಪೊಡಾ ಕೆಳದಿ, ಮಧುರೆ, ಬೇಡ, ಮರಾಟರ್||
             (-ಅಪ್ರತಿಮವೀರಚರಿತೆ)
ಅರ್ಥ:- ಸರಿಸಮಾನರಾದವರಲ್ಲಿ ಯದ್ಧಮಾಡಬೇಕು.  ತನಗಿಂತಲೂ ಬಲಿಷ್ಠರಾದವರಲ್ಲಿ ಯದ್ಧಮಾಡಿದರೆ ಸಾಯುವುದು ನಿಶ್ಚಯ.  ಮಹಾರಾಜನಾದ ಚಿಕ್ಕದೇವರಾಜ ಒಡಯನೊಡನೆ ಯದ್ಧಮಾಡಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು.
ಇಲ್ಲಿ-ತನಗೆ ಸರಿಸಮಾನರಾದವರೊಡನೆ ಸೆಣಸಬೇಕಲ್ಲದೆ, ತನಗಿಂತಲೂ ಪರಾಕ್ರಮಶಾಲಿ ಗಳಾದವರಲ್ಲಿ ಸೆಣಸಬಾರದು ಎಂಬ ಸಾಮಾನ್ಯವಾದ ಅಂದರೆ ಲೋಕ ಪ್ರಸಿದ್ಧವಾದ ಮಾತನ್ನು, ಚಿಕ್ಕದೇವರಾಜರಂತಹ ಬಲಿಷ್ಠರೊಡನೆ ಸೆಣಸಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು ಎಂಬ ವಿಶೇಷ ವಾಕ್ಯದಿಂದ ಅಂದರೆ ವರ್ಣ್ಯವಾದ ಮಾತಿನಿಂದ ಸಮರ್ಥನೆ ಮಾಡಿರುವುದರಿಂದ ಇದು ವಿಶೇಷದಿಂದ ಸಾಮಾನ್ಯವನ್ನು ಸಮರ್ಥನೆ ಮಾಡಿದ ಅರ್ಥಾಂತರನ್ಯಾಸಾಲಂಕಾರವೆನಿಸಿತು.
     (iii) ಕೋಪಾನಳನಳುರೆ ಮಹಾ
            ಕೂಪದೊಳಿಭವೈರಿ ಪಾಯ್ದು ಸತ್ತುದು ಘನ ಶೌ
            ರ್ಯೋಪೇತನಾದೊಡಂ ಸಲೆ
            ಕೋಪಾತುರನಪ್ಪನಾವನುಂ ಬಳ್ದಪನೇ
                           (-ಕರ್ಣಾಟಕ ಪಂಚತಂತ್ರ)
ಅರ್ಥ:- ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು. ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?

ಇಲ್ಲಿ-ಮೃಗರಾಜನಾದ ಸಿಂಹವು ಮೊಲದ ಮಾತಿನ ಬಲೆಗೆ ಸಿಲುಕಿ ಹಸಿವಿನ ಜೊತೆಗೆ ಮತ್ತಷ್ಟು ಕೋಪಗೊಂಡ ಕಾರಣ ಅದರ ಬುದ್ದಿ ಮಂಕಾಗಿ ಬಾವಿಯಲ್ಲಿ ನೋಡಿದ ತನ್ನ ಪ್ರತಿಬಿಂಬವನ್ನು ಮತ್ತೊಂದು ಸಿಂಹವೆಂದು ಭಾವಿಸಿ ಆ ದೊಡ್ಡ ಬಾವಿಗೆ ನೆಗೆದು ಪ್ರಾಣ ಬಿಟ್ಟಿತು. ಇಲ್ಲಿ 'ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು' ಎಂಬ ವಿಶೇಷ ವಾಕ್ಯವನ್ನು 'ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?' ಎಂಬ ಲೋಕರೂಢಿಯಾದ ಸಾಮಾನ್ಯ ವಾಕ್ಯವು ಸಮರ್ಥಿಸುತ್ತದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರವೆನಿಸುತ್ತದೆ.

() ಶ್ಲೇಷಾಲಂಕಾರ[9]
ಈ ಕೆಳಗಿನ ಒಂದು ವಾಕ್ಯವನ್ನು ವಿಚಾರಮಾಡಿರಿ-
ವಿವಾಹ ಮಂಟಪವು ಪುರಂದರ ಪುರದಂತೆಸದಾರಂಭಾನ್ವಿತ ವಿಬುಧಮಿಳಿತವಾಗಿತ್ತು”
ಇದೊಂದು ವಿವಾಹ ಮಂಟಪದ ವರ್ಣನೆ.  ಅದು ಪುರಂದರನ ಎಂದರೆ ದೇವೇಂದ್ರನ ಪಟ್ಟಣದ ಹಾಗೆ ಸದಾರಂಭಾನ್ವಿತವಾಗಿತ್ತು.  ಮತ್ತು ವಿಬುಧರಿಂದ ಮಿಳಿತವೂ ಆಗಿತ್ತು.  ಇಲ್ಲಿ ರಂಭಾ ಶಬ್ದಕ್ಕೂ ವಿಬುಧ ಎಂಬ ಶಬ್ದಕ್ಕೂ ವಿವಾಹಮಂಟಪದ ಪರವಾಗಿ ಮತ್ತು ಇಂದ್ರನಗರವಾದ ಅಮರಾವತಿಯಪರವಾಗಿ ಬೇರೆ ಬೇರೆ ಅರ್ಥಮಾಡಬೇಕು.
ವಿವಾಹ ಮಂಟಪವು-(i) ರಂಭಾನ್ವಿತವಾಗಿತ್ತು ಎಂದರೆ ಬಾಳೆ ಗಿಡಗಳಿಂದ ಕೂಡಿತ್ತು.  ಎಂದು ಅರ್ಥಮಾಡಬೇಕು.  (ರಂಭಾ=ಬಾಳೆ)   (ii) ವಿಬುಧ ಮಿಳಿತವಾಗಿತ್ತು.  ಎಂದರೆ ಬ್ರಾಹ್ಮಣರ ಸಮೂಹದಿಂದ ಕೂಡಿತ್ತು-ಎಂದು ಅರ್ಥಮಾಡ ಬೇಕು.  (ವಿಬುಧ=ಬ್ರಾಹ್ಮಣ) ಅಮರಾವತಿಯು-(iii) ರಂಭಾನ್ವಿತವಾಗಿತ್ತು ಎಂದರೆ ರಂಭೆಯೆಂಬ ಅಪ್ಸರ ಸ್ತ್ರೀಯಿಂದ ಕೂಡಿತ್ತು ಎಂದರ್ಥ ಮಾಡಬೇಕು.  ರಂಭಾ=ಅಪ್ಸರೆ (ಒಬ್ಬಳು). (iv) ವಿಬುಧ ಮಿಳಿತವಾಗಿತ್ತು.  ಎಂದರೆ ದೇವತೆಗಳಿಂದ ತುಂಬಿತ್ತು ಎಂದು ಅರ್ಥ ಮಾಡಬೇಕು.
(ವಿಬುಧ=ದೇವತೆ)
ಹೀಗೆ ‘ರಂಭಾ’ ಶಬ್ದವು ಬಾಳೆ-ಅಪ್ಸರ ಸ್ತ್ರೀಯೆಂದೂ, ‘ವಿಬುಧ’ ಶಬ್ದವು ಬ್ರಾಹ್ಮಣ ಮತ್ತು ದೇವತೆಯೆಂದೂ ಎರಡರ್ಥಗಳಿಂದ ಕೂಡಿರುತ್ತವೆ.  ಒಂದೇ ಶಬ್ದವು ವರ್ಣಿಸುವ ವಿವಾಹ ಮಂಟಪದ ಪರವಾಗಿಯೂ, ವರ್ಣಿಸುವ ವಿಷಯವಲ್ಲದ ದೇವೇಂದ್ರನ ಅಮರಾವತಿಯ ಪರವಾಗಿಯೂ ಎರಡು ಬೇರೆ ಬೇರೆ ಅರ್ಥ ಕೊಡುತ್ತದೆ.  ಇಂಥ ಪದಗಳೇ ‘ಶ್ಲೇಷೆಯೆನಿಸುವುವು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಶ್ಲೇಷಾಲಂಕಾರ:- "ಬೇರೆಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆಬೇರೆ ಅರ್ಥ ಕೊಡುವುದೇ ಶ್ಲೇಷಾಲಂಕಾರವೆನಿಸುವುದು."[10]
ಉದಾಹರಣೆಗೆ:
ಕಲಿಯಂತೆ ಸಶರಂ, ಅಂಬರ|
ತಲದಂತೆ ಸಹಂಸಂ, ಅಮರಪುರಮೆನೆಸುಮನೋ|
ನಿಲಯಂ ಸಕವಿ ನೃಪಸಭಾ|
ತಲದಂತೆ ಅಹಿಯಂತೆ ಸವಿಷಮೊಪ್ಪಿದುದು ಸರಂ||
ಇದು ಒಂದು ಸರೋವರದ ವರ್ಣನೆಯಾಗಿದೆ.  ಆ ಸರವು ಒಪ್ಪಿದುದು ಹೇಗೆ? ಅದರ ಅರ್ಥ ನೋಡಿರಿ;
ಆ ಸರವು-        
(i) ಕಲಿಯಂತೆ ಸಶರವಾಗಿತ್ತು.
(ii) ಅಂಬರ ತಲದಂತೆ ಸಹಂಸವಾಗಿತ್ತು.
(iii) ಅಮರಪುರದಂತೆ ಸುಮನೋನಿಲಯವಾಗಿತ್ತು.
(iv) ನೃಪಸಭೆಯಂತೆ ಸಕವಿಯಾಗಿತ್ತು.
(v) ಹಾವಿನಂತೆ ಸವಿಷವಾಗಿತ್ತು.
ಹೀಗಿತ್ತು.  ಈಗ ಸಶರ, ಸಹಂಸ, ಸುಮನೋನಿಲಯ, ಸಕವಿ, ಸವಿಷ-ಈ ಐದು ಪದಗಳ ಅರ್ಥಗಳೂ ಸರೋವರದ ಪರವಾಗಿ ಬೇರೆಬೇರೆ ಅರ್ಥ ಕೊಡಬೇಕು.  ಸಶರ ಅಂದರೆ ಶರಸಮೇತ ಎಂದು ಅರ್ಥ.  ಇದರಂತೆ ಸ ಬಂದಿರುವಲ್ಲೆಲ್ಲ ಸಮೇತ ಎಂದು ಅರ್ಥ ಮಾಡಬೇಕು.
(i)ಶರ:-ಸರೋವರ ಪರವಾಗಿನೀರು
ಸರೋವರ ಪರವಾಗಿ
ಕಲಿಯ ಪರವಾಗಿ
ಬಾಣ
ಅಂಬರತಲ ಆಕಾಶ ಪರವಾಗಿ
(ii)ಸಹಂಸ:-ಹಂಸಪಕ್ಷಿಯಿಂದ ಕೂಡಿತ್ತು
(ಹಂಸ=ಹಂಸಪಕ್ಷಿ)
ಸೂರ‍್ಯನಿಂದ ಕೂಡಿತ್ತು
(ಹಂಸ=ಸೂರ‍್ಯ)
(iii)ಸುಮನೋನಿಲಯ:-ಸರೋವರ ಪರವಾಗಿ
(ತಾವರೆ) ಹೂಗಳಿಂದ ಕೂಡಿತ್ತು (ಸುಮನ=ಹೂವು)
ಅಮರಪುರದ ಪರವಾಗಿ ದೇವತೆಗಳಿಂದ ಕೂಡಿತ್ತು
(ಸುಮನ=ದೇವತೆ)
(iv)ಸಕವಿ:-ಸರೋವರ ಪರವಾಗಿ ನೀರುಹಕ್ಕಿಯಿಂದ ಕೂಡಿತ್ತು (ಕವಿ=ನೀರುಹಕ್ಕಿ)ನೃಪಸಭೆಯಪರವಾಗಿ ಕವಿಗಳಿಂದ ಕೂಡಿತ್ತು (ಕವಿ-ಕಾವ್ಯ ಬರೆಯುವವ)
(v)ಸವಿಷ:-ಸರೋವರ ಪರವಾಗಿ
ನೀರಿನಿಂದ ಕೂಡಿತ್ತು (ವಿಷ=ನೀರು)
ಹಾವಿನ ಪರವಾಗಿ
ವಿಷದಿಂದ ಕೂಡಿತ್ತು
ಹೀಗೆ- (೧) ಶರ = (i) ಬಾಣ  (ii) ನೀರು
(೨) ಸುಮನ = (i) ಹೂವು  (ii) ದೇವತೆ
(೩) ಹಂಸ = (i) ಹಂಸ ಪಕ್ಷಿ (ii) ಸೂರ‍್ಯ
(೪) ಕವಿ = (i) ನೀರುಹಕ್ಕಿ (ii) ಕವಿ
(೫) ವಿಷ = (i) ನೀರು (ii) ವಿಷ
ಒಂದೇ ಶಬ್ದವು ವರ್ಣಿಸುವ ಸರೋವರದ ಪರವಾಗಿಯೂ ಅವರ್ಣ್ಯವಾದ ಮತ್ತೊಂದು ವಿಷಯದ ಪರವಾಗಿಯೂ ಬೇರೆಬೇರೆ ಅರ್ಥಗಳನ್ನು ಕೊಡುವುದರಿಂದ ಶ್ಲೇಷಾಲಂಕಾರವೆನಿಸುವುದು.

[1] ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕಗಳಲ್ಲಿ ಒಂದಾದರೂ, ಕೆಲವಾದರೂ ಸ್ಪಷ್ಟವಾಗಿ ಹೇಳಿರದಿದ್ದರೆ ಅದು ಲುಪ್ತೋಪಮೆಯೆನಿಸುವುದು.
[2] ಉಪಮಾಯತ್ರ ಸಾದೃಶ್ಯ ಲಕ್ಷ್ಮೀರುಲ್ಲಸತಿ ದ್ವಯೋಃ ||
ಅರ್ಥ:- ಪ್ರಸ್ತುತವಾದ ವಸ್ತುವಿಗೆ ಪೆರತೊಂದು ವಸ್ತುವಿನೊಡನೆ ಒಂದು ಧರ್ಮದಿಂ ಸಾದೃಶ್ಯವ್ಯಕ್ತವಾಗಿ ತೋರೆಯದು ಉಪಮೇಯೆನಿಪುದು  (- ಅಪ್ರತಿಮವೀರಚರಿತೆ) (ವಿಶೇಷ ತಿಳಿವಳಿಕೆಗಾಗಿ ಅಪ್ರತಿಮ ವೀರ ಚರಿತೆಯಲ್ಲಿನ ವಿಷಯ ಕೊಡಲಾಗಿದೆ.)
[3] ವಿಷಯ್ಯಭೇದ ತಾದ್ರೂಪ್ಯರಂಜನಂ ವಿಷಯಸ್ಯಯತ್ ರೂಪಕಂ.. .. ..
ಅರ್ಥ:-ವರ್ಣಿಸುವ ವಸ್ತುವನುಪಮಾನವಸ್ತುವೆಂದೇ ಪೇಳ್ವುದು ಅಭೇದರೂಪಕಂ.
(-ಅಪ್ರತಿಮವೀರಚರಿತ್ರೆ)
(ಈ ಅಲಂಕಾರದಲ್ಲಿ ಆರು ಬಗೆ.  ಪ್ರಕೃತ ಅಭೇದರೂಪಕವೊಂದನ್ನು ತಿಳಿದರೆ ಸಾಕು.  ಸೂತ್ರದಲ್ಲಿ ತಾದ್ರೂಪ್ಯರೂಪಕದ ಪ್ರಸ್ತಾಪವೂ ಇದೆ.  ಅದು ಅನವಶ್ಯಕ.)
[4] ಸಂಭಾವನಾಸ್ಯುರುತ್ಪ್ರೇಕ್ಷಾ …… (ಸಂಭಾವನಾಸ್ಯಾದುತ್ಪ್ರೇಕ್ಷಾ.. .. .. )
ವರ್ಣಿಸುವ ಉಪಮೇಯಕ್ಕೆ ಉಪಮಾನದ ಸಾದೃಶ್ಯವಿರ್ಪುದರಿಂದ ಉಪಮಾನಮೆಂದೆಣಿಸುವುದು (ಊಹಿಸುವುದು), ಉತ್ಪ್ರೇಕ್ಷೆಯೆನಿಸುವುದು.  (ಎಂದರೆ ವಸ್ತುಸ್ವರೂಪದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಸಂಭಾವಿಸುವುದು, ಎಂದರೆ ಕಲ್ಪಿಸುವುದು ಮುಖ್ಯವಾದ ಅಂಶ.)
[5] ಚೇದ್ಬಿಂಬ ಪ್ರತಿಬಿಂಬತ್ವಂ ದೃಷ್ಟಾಂತಸ್ತದಲಂಕೃತಿಃ
ಅರ್ಥ:- ಎರಡು ವಾಕ್ಯಂಗಳ್ ಬೇರಾಗಿ ಒಂದರ್ಕೊಂದು ಸಾದೃಶ್ಯದಿಂ ಪ್ರತಿಬಿಂಬದಂತೆ ತೋರೆಯದು ದೃಷ್ಟಾಂತಾಲಂಕಾರಂ. (-ಅಪ್ರತಿಮವೀರಚರಿತ್ರೆ)
[6] ಉಕ್ತಿರರ್ಥಾಂತರನ್ಯಾಸಃ ಸ್ಯಾತ್ ಸಾಮಾನ್ಯ ವಿಶೇಷಯೋಃ
ಅರ್ಥ:- ಸಾಮಾನ್ಯ ವಿಶೇಷಂಗಳಂ ಪೇಳ್ವದು ಅರ್ಥಾಂತರನ್ಯಾಸಂ.  ಅದುವುಂ ಪ್ರಸ್ತುತಮಾದರ್ಥಂ ವಿಶೇಷಮಾಗಿ, ಅಪ್ರಸ್ತುತಮಾದರ್ಥಂ ಸಾಮಾನ್ಯ ಮಾಗೆಯದು (೧) ಸಾಮಾನ್ಯದಿಂ ವಿಶೇಷ ಸಮರ್ಥನ ರೂಪಮಾದ ಅರ್ಥಾಂತರನ್ಯಾಸಂ.  ಸಾಮಾನ್ಯಂ ಪ್ರಸ್ತುತಮಾಗೆ ವಿಶೇಷಂ ಅಪ್ರಸ್ತುತ ಮಾಗೆ (೨) ವಿಶೇಷದಿಂ ಸಾಮಾನ್ಯ ಸಮರ್ಥನ ರೂಪಮಾದ ಅರ್ಥಾಂತರ ನ್ಯಾಸಾಲಂಕಾರಂ.    (-ಅಪ್ರತಿಮವೀರ ಚರಿತೆ)
[7] ದೃಷ್ಟಾಂತವಾಗಿ ಹೇಳಿದ ವಿಚಾರವು ಸಾಮಾನ್ಯವಾದ ಮಾತಾಗಿ ಲೋಕ ಪ್ರಸಿದ್ಧವಾಗಿದ್ದರೆ ಅರ್ಥಾಂತರನ್ಯಾಸಾಲಂಕಾರವಾಗುವುದು.
[8] ಚಿಕ್ಕದೇವರಾಜರ ಶೌರ್ಯವನ್ನು ವರ್ಣಿಸುವ ಒಂದು ಸಂದರ್ಭದ ಪದ್ಯ.
[9] ನಾನಾರ್ಥ ಸಂಶ್ರಯಃ ಶ್ಲೇಷಃ ವರ್ಣಾವರ್ಣ್ಯೋ ಭಯಾತ್ಮಕಂ
ಅರ್ಥ:- ವಾಕ್ಯದೊಳ್ ಪದಂಗಳ್ ನಾನಾರ್ಥಮಾಗಿರೆ ಅದು ಶ್ಲೇಷಾಲಂಕಾರಮೆನಿಸುವುದು.  (ಇದರಲ್ಲಿ ಹಲವಾರು ವಿಧಗಳುಂಟು.  ಆ ಪ್ರಕಾರಗಳೆಲ್ಲ ಪ್ರಕೃತ ಅನವಶ್ಯ.)     (-ಅಪ್ರತಿಮವೀರ ಚರಿತೆ)
[10] ಶಬ್ದಗಳನ್ನು ಒಡೆದು ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಒಡೆಯದೆ ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಶಬ್ದವನ್ನು ಒಡೆದು ಬೇರೆಬೇರೆ ಅರ್ಥ ಮಾಡಿದರೆ ಸಭಂಗ ಶ್ಲೇಷೆಯೆಂದೂ ಒಡೆಯದೇ ಅರ್ಥ ಮಾಡಿದರೆ ಅಭಂಗಶ್ಲೇಷೆಯೆಂದೂ ಕರೆಯುವರು.  ಸಭಂಗಶ್ಲೇಷೆ ಪ್ರಕೃತ ಅನವಶ್ಯಕ.

16 ಕಾಮೆಂಟ್‌ಗಳು:

  1. 'ರಾಜ್ಯಮದಿರಾಮದೋನ್ಮತ್ತ' ಮತ್ತು
    'ಗರ್ವಗ್ರಹವ್ಯಗ್ರಚಿತ್ತನು.' ಈ ಅಲಂಕಾರ ಗಳನ್ನು ಹೆಸರಿಸಿ.

    ಪ್ರತ್ಯುತ್ತರಅಳಿಸಿ
  2. ಅಲಂಕಾರವನ್ನು ಹೆಸರಿಸಿ ಸಮನ್ವಯಗೊಳಿಸಿ. ಹಾಡು ನುಡಿಗುಂಡುಗಳು

    ಪ್ರತ್ಯುತ್ತರಅಳಿಸಿ
  3. ನೋವೊಂದು ಅಲೆಯಂತೆ ಬಂದು ಕೂಗಿ ಕೊಳ್ಳುವಂತೆ ಮಾಡಿತು

    ಪ್ರತ್ಯುತ್ತರಅಳಿಸಿ
  4. ಸುರಚಾಪಂಬೋಲೆ ಹಾಗೂ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಇವುಗಳು ಯಾವ ಅಲಂಕಾರ

    ಪ್ರತ್ಯುತ್ತರಅಳಿಸಿ
  5. ತುಂಬಾ ಒಳ್ಳೆಯ ವ್ಯಾಕರಣ ಧನ್ಯವಾದ

    ಪ್ರತ್ಯುತ್ತರಅಳಿಸಿ