ನನ್ನ ಪುಟಗಳು

26 ಅಕ್ಟೋಬರ್ 2017

ಸೋಮೇಶ್ವರ ಶತಕ(ಪದ್ಯ-6) Someshwara-Shathaka-Poem-6

ಪುಲಿಗೆರೆ ಸೋಮನಾಥ
  •      ಪುಲಿಗೆರೆ ಸೋಮನಾಥ (ಜನನ ಸುಮಾರು ೧೨೯೯) ಹಳಗನ್ನಡದ ಕವಿಗಳಲ್ಲೊಬ್ಬ ಸೋಮನಾಥನು ಹಿಂದಿನ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು. ಆದಯ್ಯನ ಪರಮ ಶಿವಭಕ್ತನಾಗಿದ್ದ, ಅವನು ಈ ದೇವಾಲಯದಲ್ಲಿ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ.
  •     ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿದೆ. ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ೧೨೦ ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ. 
  •       ಕನ್ನಡ, ಸಂಸ್ಕೃತ ಭಾಷಾ ಪಂಡಿತನಾದ ಈತನ ಅಂಕಿತ ನಾಮ “ಹರಹರ ಶ್ರೀ ಚನ್ನಸೋಮೇಶ್ವರ” 
  •      ಕನ್ನಡದಲ್ಲಿ 'ರತ್ನಾಕರಂಡಕ' ಕಾವ್ಯವನ್ನು ಚಂಪೂವಿನಲ್ಲಿಯು, 'ಸೋಮೇಶ್ವರ ಶತಕ'ವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.
**********
ಶ್ರೀ ಸೋಮನಾಥ ದೇವಾಲಯ, ಲಕ್ಷ್ಮೇಶ್ವರ
ಕಲ್ಲುತಾ ಕರಗುತ್ತ. ಮಲ್ಲಿಗೆಯ ಹೂವಾಗಿ
ಚಲ್ಲುವರೆದಿಹುದು ಶಿಲ್ಪದಲಿ! ಪುಲಿಗೆರೆಯ
ನಲ್ಮೆಯ ಸೋಮನಾಥನಲಿ!

ಶಿಲೆಯಲ್ಲಿ ಅಡಗಿರುವ ಕಲೆಯನ್ನು ಅರಳಿಸುವ.
ಒಲುಮೆಯ ವಿದ್ಯೆ ಪಡೆದಂತೆ! ಸ್ಥಪತಿಗಳ
ನಿಲಯ ಫುಲಿಗೆರೆಯ ಮಂದಿರ ವು !

ಶರಣ ಆದಯ್ಯನ ವರಸೋಮದೇವನು
ಕರುಣೆಯ ತೋರಿ ಪುಲಿಗೆರೆಗೆ! ಬಂದುತಾ
ಚಿರವಾಗಿ ನೆಲೆಸಿ ನಿಂತಾನ!

ಶಾಸನ ಶಿಲ್ಪಗಳ ಕೋಶವು ಪುಲಿಗೆರೆ
ಲೇಸು ಆದಯ್ಯನ ನೆಲೆವೀಡು! ಸೋಮನಾಥ
ವಾಸ ಹೂಡಿದ ಚಲುನಾಡು! 

(ಕೃಪೆ: ಶಿವಾಮೃತ ಬ್ಲಾಗ್)
 *******

         ಸೌರಾಷ್ಟ್ರದ ಸೋಮನಾಥ: ಜೈನಕಾಶಿ ಎನಿಸಿದ್ದ ಇಲ್ಲಿ ಸೌರಾಷ್ಟ್ರದ ಸೋಮನಾಥೇಶ್ವರ ಪ್ರತಿಷ್ಠಾಪನೆಯಾದ ಬಗ್ಗೆ ಐತಿಹ್ಯವೊಂದಿದೆ.  ಅದು ಜೈನ ಹಾಗೂ ವೀರಶೈವ ಧರ್ಮದ ನಡುವಿನ ಘರ್ಷಣೆಯನ್ನು ಹೇಳುತ್ತದೆ.  ಸೌರಾಷ್ಟ್ರ ಪ್ರಾಂತ್ಯದ ಆದಯ್ಯ ಎಂಬ ಶಿವಭಕ್ತ ಇಲ್ಲಿಗೆ ಬಂದು ಜೈನಧರ್ಮದ ಪದ್ಮಾವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ.
          ಶಿವಭಕ್ತರಿಗಾಗಿ ಮಾಡಿದ ಪ್ರಸಾದವನ್ನು ಆಕೆಯ ತಾಯಿ ಜೈನಮುನಿಗಳಿಗೆ ಬಡಿಸಿದ್ದನ್ನು ಕೇಳಿ ಕಿಡಿಯಾಗಿ, ಸೌರಾಷ್ಟ್ರದ ಸೋಮನಾಥನನ್ನು ತರಲು ಹೋದ. ಅಲ್ಲದೇ ಇಲ್ಲಿ ಸೋಮನಾಥನನ್ನು ಪ್ರತಿಷ್ಠಾಪಿಸಿಯೇ ತೀರುವುದಾಗಿ ಪ್ರತಿಜ್ಞೆ ಮಾಡಿದ. ಹೀಗೆ ಹೊರಟ ಆತನಿಗೆ ದಾರಿಯಲ್ಲಿ ಶಿವ ಪ್ರತ್ಯಕ್ಷನಾಗಿ,  ತಾನೇ ಪುಲಿಗೆರೆಯ ಬಸದಿಗೆ ಬಂದು ನಿಲ್ಲುವುದಾಗಿ ಹೇಳುತ್ತಾನೆ. ಆ ಪ್ರಕಾರ ಆದಯ್ಯ ಬಂದು ನೋಡಿದಾಗ ಇಲ್ಲಿನ ಸುರಹೊನ್ನೆ ಬಸದಿಯಲ್ಲಿ ಸೋಮನಾಥೇಶ್ವರ ನಿಂತಿದ್ದನಂತೆ.
       ಸೋಮನಾಥೇಶ್ವರ ದೇವಾಲಯದಲ್ಲಿ ಗರ್ಭಗುಡಿ, ಅರ್ಧಮಂಟಪ, ನವರಂಗ, ಮುಖಮಂಟಪಗಳಿವೆ. ಮೇ ಕೊನೆ ವಾರದ 5 ದಿನಗಳ ಬೆಳಗಿನ ಸೂರ್ಯರಶ್ಮಿ ಈ ಎಲ್ಲ ಮಂಟಪ ದ್ವಾರಗಳನ್ನು ದಾಟಿ ಗರ್ಭಗುಡಿಯ ಶಿವಪಾರ್ವತಿಯರ ಮೇಲೆ ಬೀಳುತ್ತಿದ್ದು, ಅದನ್ನು ನೋಡಲು ಜನಸಾಗರವೇ ಸೇರಿರುತ್ತದೆ.
(ಕೃಪೆ: ಪ್ರಜಾವಾಣಿ ಸುದ್ಧಿ-15 Mar, 2016)

*********

ಸೋಮೇಶ್ವರ ಶತಕ ಪದ್ಯಭಾಗದ (ಭಾವಾರ್ಥ)

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೧ ||


ಭಾವಾರ್ಥ:- ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ಆತ್ಮಬಂಧು(ನೆಂಟ). ಸಾಕಿ, ಸಲಹಿ  ಕಾಪಾಡುವವನೇ ತಂದೆ. ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ, ಒಂದಕ್ಷವನ್ನು ಕಲಿಸಿದವನಾದರೂ ಅವನೂ ಗುರುವೇ. ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಮುನಿ. ಒಳ್ಳೆಯ ವಿದ್ಯೆಯೇ ಪುಣ್ಯಸಂಪಾದನೆಗೆ ದಾರಿ. ಒಳ್ಳೆಯ ಮಗನೇ ಸದ್ಗತಿಯನ್ನು ತಂದುಕೊಡುತ್ತಾನೆ ಎಂದು ಸೋಮನಾಥ ಹೇಳಿದ್ದಾನೆ.

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |
ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||


ಭಾವಾರ್ಥ:- ಪ್ರಜೆಗಳನ್ನು ಪಾಲಿಸಬಲ್ಲವನೆ ನಿಜವಾದ ಅರಸ. ಲಂಚ ಆಮಿಷಗಳನ್ನು ಬಯಸದವನೇ ನಿಜವಾಗಿ ಒಳ್ಳೆಯ ಮಂತ್ರಿ. ತಂದೆ-ತಾಯಿಯನ್ನು ಸಲಹುವವನೇ ಧರ್ಮವಂತ, ಭಕ್ತಿಯಿಂದ ಪೂಜಿಸುವವನೇ ನಿಜಕವಾದ ಭಕ್ತ. ಧೈರ್ಯವಂತನೇ ನಿಜವಾದ ಭಟ. ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ(ಬ್ರಾಹ್ಮಣ) ಎಂದು ಸೋಮನಾಥ ಹೇಳಿದ್ದಾನೆ.

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ ||
ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ |
ಪತಿಕಾರ‍್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೩ ||


ಭಾವಾರ್ಥ:- ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ಈ ಪದ್ಯಭಾಗದಲ್ಲಿ ಪಟ್ಟಿಮಾಡಿದ್ದಾನೆ. ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ, ಸತ್ಯಾತ್ಮನೂ, ರೂಧಿಯಲ್ಲಿರುವ ಹಲವು ಲಿಪಿ-ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ.

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಭೀಜಂ ಕೆಲಂ |
ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || ೪ ||


ಭಾವಾರ್ಥ:- ಜೀವನದಲ್ಲಿ ಆಶಾವಾದಿಯಾಗಿರಬೇಕು. ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬುದನ್ನು ಇಲ್ಲಿ ಕವಿ ಪ್ರತಿಪಾದಿಸಿದ್ದಾನೆ.
    ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಸಿರಿವಂತನಾಗುವುದಿಲ್ಲವೇ? ಎಂದು ಹೇಳುವ ಮೂಲಕ, ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.



***********